ಗದಗ: ಇಡೀ ಏಷ್ಯಾ ಖಂಡದಲ್ಲೇ ಗದಗ ಜಿಲ್ಲೆಯ ಮೆಣಸಿನಕಾಯಿಗೆ ಎಲ್ಲೆಲ್ಲದ ಬೇಡಿಕೆ. ಹೌದು ಈ ಭಾರಿ ಅನಾವೃಷ್ಟಿ ನಡುವೆ ಅದ್ಭುತವಾಗಿ ಮೆಣಸಿನಕಾಯಿ ಫಸಲು ಬಂದಿದೆ. ಹೀಗಾಗಿ ಮೆಣಸಿನಕಾಯಿ ಬೆಳೆದ ರೈತರು ಬಂಪರ್ ಮೇಲೆ ಬಂಪರ್ ಹೊಡೆಯುತ್ತಿದ್ದಾರೆ. ಆದರೆ ಮೆಣಸಿನಕಾಯಿಗೆ ಚಿನ್ನದ ಬೆಲೆ ಬಂದಿದ್ದೆ ತಡ, ಅನ್ನದಾತರಿಗೆ ಹೊಸ ಟೆನ್ಶನ್ ಶುರುವಾಗಿದೆ.
ಗದಗ ಜಿಲ್ಲೆಯ ಮೆಣಸಿನಕಾಯಿ ಅಂದ್ರೆ ಸಾಕು ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಎಲ್ಲಿಲ್ಲದ ಬೇಡಿಕೆ. ಈ ಭಾರಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ದಾಖಲೆ ಮಾಡಿದೆ. ಜಿಲ್ಲೆಯ ರೋಣ, ಗಜೇಂದ್ರಗಡ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ ಸೇರಿದಂತೆ ಜಿಲ್ಲೆಯ ಏಳು ತಾಲೂಕಿನಲ್ಲಿ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಆದರೆ ಈ ಭಾರಿ ಅನಾವೃಷ್ಟಿಯಿಂದ ಸಾಕಷ್ಟು ಪ್ರಮಾಣದಲ್ಲಿ ಮೆಣಸಿನಕಾಯಿ ಬೆಳೆ ನಾಶವಾಗಿದೆ. ಆದ್ರೂ ಅಳಿದು- ಉಳಿದ ಮೆಣಸಿನಕಾಯಿಗೆ ಬಂಪರ್ ಬೆಲೆ ಸಿಗ್ತಾಯಿದೆ. ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದ ಮೆಣಸಿನಕಾಯಿ ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ ಇತಿಹಾಸ ಸೃಷ್ಟಿ ಮಾಡಿದೆ. ಇತ್ತೀಚೆಗೆ ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಮೆಣಸಿನಕಾಯಿ 41 ಸಾವಿರ ರೂಪಾಯಿ ಮಾರಾಟವಾಗುವ ಮೂಲಕ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿತ್ತು. ಕಳೆದ ವಾರ ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸವಡಿ ಗ್ರಾಮದ ರೈತನ ಮೆಣಸಿನಕಾಯಿ 51 ಸಾವಿರ ರೂಪಾಯಿ ಮಾರಾಟವಾಗುವ ಮೂಲಕ ಐತಿಹಾಸಿಕ ದಾಖಲೆ ಮಾಡಿದೆ. ಹೀಗಾಗಿ ಗದಗ ಜಿಲ್ಲೆಯ ಮೆಣಸಿನಕಾಯಿ ಬೇಡಿಕೆ ಹೆಚ್ಚಾಗಿದ್ದು, ಮೆಣಸಿನಕಾಯಿ ಕಳ್ಳರ ಹಾವಳಿ ಕೂಡಾ ಹೆಚ್ಚಾಗಿದೆ ಅಂತಾರೆ ರೈತರು.ಮೆಣಸಿನಕಾಯಿಗೆ ಚಿನ್ನದ ಬೆಲೆ ಬರ್ತಾಯಿರೋದರಿಂದ ಅನ್ನದಾತರಿಗೆ ಮೆಣಸಿನಕಾಯಿ ರಕ್ಷಣೆ ಮಾಡಿಕೊಳ್ಳುವುದು ಸವಾಲಾಗಿದೆ. ಅನ್ನದಾತರ ಕಣ್ಣು ತಪ್ಪಿಸಿ ಜಮೀನಿನಲ್ಲಿನ ಮೆಣಸಿನಕಾಯಿ ಕಳ್ಳತನ ಮಾಡ್ತಾಯಿದ್ದಾರೆ. ಇನ್ನೂ ಮೆಣಸಿನಕಾಯಿ ಫಸಲು ಒಣ ಹಾಕಿದ್ರೆ ಅಲ್ಲಿಯೂ ಕೂಡಾ ಮೆಣಸಿನಕಾಯಿ ಕಳ್ಳತನ ಮಾಡ್ತಾಯಿದ್ದಾರೆ. ಹೀಗಾಗಿ ಮೆಣಸಿನಕಾಯಿ ಬೆಳೆದ ರೈತರು ರಾತ್ರಿ- ಹಗಲು ಎನ್ನದೆ ಮೆಣಸಿನಕಾಯಿ ರಕ್ಷಣೆ ಮಾಡಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ರೈತರು ಮೆಣಸಿನಕಾಯಿ ಕಾಯದಿದ್ದರೆ ಕಳ್ಳರು ರಾತ್ರೋ ರಾತ್ರಿ ಮೆಣಸಿನಕಾಯಿ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿದ್ದಾರೆ. ಹೀಗಾಗಿ ನಮಗೆ ಕೃಷಿ ಅಧಿಕಾರಿಗಳು ಅಥವಾ ಪೊಲೀಸರು ಸಹಾಯ ಮಾಡಬೇಕು ಅಂತಿದ್ದಾರೆ ರೈತರು.