ಕೊಡಗು: ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ಸರ್ಕಾರಿ ರಜೆ ಬಂದಿದ್ದೇ ತಡ, ಕೊಡಗು ಜಿಲ್ಲೆಗೆ ಸಾವಿರಾರು ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ. ಹೀಗಾಗಿ ಕೊಡಗಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ದುಬಾರೆ, ದುಬಾರೆ ಸಾಕಾನೆ ಶಿಬಿರ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಸಾವಿರಾರು ಪ್ರಯಾಣಿಕರು ತುಂಬಿ ತುಳುಕುತಿದ್ದಾರೆ. ಆದರೆ ಎಲ್ಲೆಡೆ ಸಾಮಾಜಿಕ ಅಂತರ ಮಾತ್ರ ಸಂಪೂರ್ಣ ಮಾಯವಾಗಿಬಿಟ್ಟಿದೆ.
ಹೌದು, ವಿಶ್ವ ಪ್ರಸಿದ್ಧ ದುಬಾರೆ ಸಾಕಾನೆ ಶಿಬಿರ ನೋಡಲು ದೇಶ, ವಿದೇಶದಿಂದಲೂ ಪ್ರವಾಸಿಗರು ಬರುತ್ತಾರೆ. ಅಲ್ಲಿರುವ ಆನೆಗಳನ್ನು ನೋಡಿ ಎಂಜಾಯ್ ಮಾಡುತ್ತಾರೆ. ಅಷ್ಟೇ ಅಲ್ಲದೇ, ಸಾಕಾನೆ ಶಿಬಿರಕ್ಕೆ ಹೋಗಬೇಕಾದರೆ, ಮೈತುಂಬಿ ಹರಿಯುವ ಕಾವೇರಿ ನದಿಯನ್ನು ಬೋಟ್ ಮೂಲಕ ಹಾದು ದಾಟಬೇಕು. ಅದು ಕೂಡ ರೋಚಕ ಅನುಭವವೇ ಸರಿ. ಹೀಗಾಗಿ ಸಾವಿರಾರು ಪ್ರವಾಸಿಗರು ದುಬಾರೆ ಸಾಕಾನೆ ಶಿಬಿರವನ್ನು ನೋಡಲು ಮುಗಿಬೀಳುತ್ತಾರೆ. ಕ್ರಿಸ್ ಮಸ್ ಹಬ್ಬ, ಭಾನುವಾರದ ರಜೆ ಸೇರಿದಂತೆ ಮೂರು ದಿನಗಳ ಕಾಲ ನಿರಂತರವಾಗಿ ರಜೆ ಇರುವುದರಿಂದ ಸಾಕಾನೆ ಶಿಬಿರ ನೋಡಲು ಸಾವಿರಾರು ಜನರು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಆದರೆ ಈ ವೇಳೆ ಯಾರೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಲ್ಲುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರವಾಸಿಗರು ಕೂಡ ಕೊರೋನಾ ಹರಡಬಹುದಾ ಎನ್ನೋ ಸಣ್ಣ ಅಳುಕು ಕೂಡ ಇಲ್ಲದೆ ಎಲ್ಲವನ್ನು ಮರೆತು ನಿಲ್ಲುತ್ತಿದ್ದಾರೆ.ಒಬ್ಬರಿಗೆ ಒಬ್ಬರು ಅಂಟಿಕೊಂಡೇ ಹನುಮಂತನ ಬಾಲದಂತೆ ದೊಡ್ಡ ಸರದಿಯ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಸಾಕಷ್ಟು ಜನರು ಮಾಸ್ಕ್ ಹಾಕಿಕೊಂಡಿದ್ದರಾದರೂ ಸಾಕಷ್ಟು ಜನರು ಮಾಸ್ಕ್ ಅನ್ನು ಕ್ರಮಬದ್ಧವಾಗಿಯೇ ಹಾಕಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿರೋದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಜೊತೆಗೆ ಕಾವೇರಿ ನದಿ ದಾಟಲು ಬೋಟ್ ಏರಿದರೆ ಕನಿಷ್ಠ 12 ಜನರನ್ನು ಕರೆದೊಯ್ಯಬಹುದು. ಆದರೆ ಬೋಟ್ ನಲ್ಲಿ ಬರೋಬ್ಬರಿ 20 ಜನರನ್ನು ಕೂರಿಸಿ ಕರೆದೊಯ್ಯಲಾಗುತ್ತಿದೆ. ಹೀಗಾಗಿ ಪ್ರವಾಸಿ ತಾಣಗಳು ಕೊರೋನಾ ಹರಡುವುದಕ್ಕೆ ರಹದಾರಿಗಳಾಗಿ ಬಿಡುತ್ತವಾ ಎನ್ನುವ ಆತಂಕ ಶುರುವಾಗಿದೆ.