ರಾಮನಗರ(ಡಿಸೆಂಬರ್.24): ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಒಕ್ಕೂಟದ ಜಗಳ ಕಳೆದ ಸುಮಾರು ದಿನಗಳಿಂದ ನಡೆಯುತ್ತಿದೆ. ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಆಡಳಿತ ಮಂಡಳಿಯ ಜೊತೆಗೆ ಸಂಧಾನ ಸಭೆ ನಡೆಸಿದರು. ಆದರೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದೇ ಸಭೆ ವಿಫಲವಾಯ್ತು. ಡಿ.ಕೆ.ಸುರೇಶ್ ಕೂಡ ಟೊಯೋಟಾ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಮಿಕರು ಸಹ ಹೋರಾಟ ಮುಂದುವರೆಸಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ಕಳೆದ 45 ದಿನಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಕಂಪನಿಯ ವಿರುದ್ಧ ಕಾರ್ಮಿಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕಾರ್ಮಿಕರ ಹೋರಾಟ ವಿರೋಧಿಸಿ ಕಂಪನಿ ಈಗಾಗಲೇ 65 ಜನ ಕಾರ್ಮಿಕರನ್ನ ಕೆಲಸದಿಂದಲೇ ಅಮಾನತ್ತು ಮಾಡಿದೆ. ಈ ಕಾರಣ ಸಂಸದ ಡಿ.ಕೆ.ಸುರೇಶ್ ಬಿಡದಿಯ ಈಗಲ್ ರೆಸಾರ್ಟ್ನಲ್ಲಿ ಟೊಯೋಟಾ ಆಡಳಿತ ಮಂಡಳಿಯ ಪ್ರಮುಖರ ಸಭೆ ನಡೆಸಿದರು.
ಸರಿಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿದರು ಸಹ ಆಡಳಿತ ಮಂಡಳಿಯವರು ಕಾರ್ಮಿಕರ ಜೊತೆ ರಾಜೀಯಾಗಲು ಒಪ್ಪಿಲ್ಲ. ಈ ಹಿನ್ನೆಲೆ ಸಭೆಯ ನಂತರ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಟೊಯೋಟಾದವರಿಗೆ ಎಷ್ಟೇ ಮನವಿ ಮಾಡಿದರು ಒಪ್ಪುತ್ತಿಲ್ಲ. ಅವರು ಸಂಪೂರ್ಣವಾಗಿ ಕಾರ್ಮಿಕ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇದನ್ನ ಬಗೆಹರಿಸುವುದಕ್ಕೆ ಮುಂದಾಗಿಲ್ಲ. ಜಪಾನ್ನಿಂದ ಬಂದು ಇಲ್ಲಿ ನಮ್ಮ ರೈತರ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.