ಕೊಡಗು: ಮಂಜಿನನಗರಿ ಮಡಿಕೇರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಇಲ್ಲಿನ ಸೌಂದರ್ಯ ಸವಿಯಲು ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ತನ್ನದೇ ವಿಶಿಷ್ಠ ಸಂಪ್ರದಾಯಗಳಿಂದ ಎಲ್ಲರ ಗಮನ ಸೆಳೆಯುವ ಜಿಲ್ಲೆಯಲ್ಲಿ ಎತ್ತ ನೋಡಿದರೂ ಕಾನನಗಳ ಹೊದ್ದು ಗಗನ ಚುಂಬಿಸುವ ಬೆಟ್ಟ ಗುಡ್ಡಗಳು, ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳ ಕಾಣಸಿಗುತ್ತವೆ. ಇಂತಹ ಸುಂದರ ತಾಣದಲ್ಲಿ ಪ್ರವಾಸಿಗರಿಗೂ ಸುತ್ತಾಡುವುದು ಎಂದರೆ ತುಂಬಾನೇ ಮಜಾ. ಆದರೆ ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಎದುರಾದ ಭೀಕರ ಭೂಕುಸಿತ ಇಡೀ ಜಿಲ್ಲೆಯನ್ನು ತತ್ತರಿಸುವಂತೆ ಮಾಡಿತ್ತು. ಸ್ವಲ್ಪ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದ ಕೊಡಗಿಗೆ ಮತ್ತೆ ಈ ಬಾರಿ ಕೊರೋನಾ ಮಹಾಮಾರಿ ತೀವ್ರ ಸಂಕಷ್ಟ ತಂದೊಡ್ಡಿತು. ಹೀಗಾಗಿ ಕೊಡಗಿನ ಪ್ರವಾಸೋದ್ಯಮ ಬಹುತೇಕ ನೆಲಕಚ್ಚುವಂತೆ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಖಾಸಗೀ ಸಂಸ್ಥೆಯೊಂದಕ್ಕೆ ಹೆಲಿಟೂರಿಸಂ ನಡೆಸಲು ಅವಕಾಶ ನೀಡಿದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಖಾಸಗೀ ಸಂಸ್ಥೆಯ ಸಹಭಾಗಿತ್ವದಲ್ಲಿ ಕೆಲವು ದಿನಗಳ ಮಟ್ಟಿಗೆ ಹೆಲಿಟೂರಿಸಂಗೆ ಅವಕಾಶ ನೀಡಲಾಗಿದೆ.
ತುಂಬೆ ಏವಿಯೇಷನ್ ಎನ್ನುವ ಸಂಸ್ಥೆ ಮಡಿಕೇರಿಯಲ್ಲಿ ಬುಧವಾರದಿಂದ ಜನವರಿ 1 ವರೆಗೆ ಹೆಲಿಕಾಪ್ಟರ್ ಮೂಲಕ ಮಡಿಕೇರಿ ವೀಕ್ಷಣೆ ಮಾಡಿಸಲಿದೆ. ಸಂಪೂರ್ಣ ಬೆಟ್ಟಗುಡ್ಡಗಳು, ಹಸಿರು ಕಾನನಗಳಿಂದಲೇ ತುಂಬಿರುವ ಮಡಿಕೇರಿಯ ಸೌಂದರ್ಯವನ್ನು ರಸ್ತೆಗಳ ಮೂಲಕವಷ್ಟೇ ಸವಿದಿದ್ದ ಪ್ರವಾಸಿಗರು ಇನ್ನು ಒಂದು ವಾರಗಳ ಕಾಲ ಆಕಾಶದಲ್ಲಿ ತೇಲಾಡುತ್ತಾ ಮಂಜಿನನಗರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಡ್ ಮೈದಾನದಿಂದ ಹಾರಾಟ ನಡೆಸುವ ಹೆಲಿಕ್ಯಾಪ್ಟರ್ ಮಡಿಕೇರಿಯ ನಗರ ಸೇರಿದಂತೆ ಮಡಿಕೇರಿ ಹೊರವಲಯದಲ್ಲೂ ಹಾರಾಟ ನಡೆಸಲಿದೆ. ಒಂದು ಬಾರಿಗೆ ಒಟ್ಟು ಆರು ಜನರನ್ನು ಹೊತ್ತೊಯ್ಯುವ ಹೆಲಿಕ್ಯಾಪ್ಟರ್ ಎಂಟು ನಿಮಿಷಗಳ ಕಾಲ ಅಥವಾ 15 ನಿಮಿಷಗಳ ಕಾಲ ಆಕಾಶದಲ್ಲಿ ಹಾರಾಟ ನಡೆಸಲಿದೆ.