ಬೆಂಗಳೂರು: ನಿನ್ನೆ ರಾತ್ರಿ ಖಾಸಗಿ ಹೋಟೆಲ್ನಲ್ಲಿ ಪ್ರತ್ಯೇಕವಾಗಿ ನಡೆದ ಸಚಿವರು ಹಾಗೂ ಶಾಸಕರು ಸಭೆಗೆ ಸಂಬಂಧಿಸಿದಂತೆ ಸಚಿವ ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದು, ‘ಈಗಲೂ ಕೂಡ ಅವರೆಲ್ಲರೂ ನನ್ನ ಸ್ನೇಹಿತರೆ. ನಮ್ಮಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಮುಂದೆ ಈ ರೀತಿ ಸಭೆಗಳು ನಡೆಯಬಾರದು. ಪ್ರತ್ಯೇಕ ಸಭೆಗಳನ್ನು ನಡೆಸುವುದಕ್ಕೆ ಕಡಿವಾಣ ಹಾಕಬೇಕು. ಇದರಿಂದ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಾನು ನಾಯಕ ಎಂದು ಎಲ್ಲಿಯೂ ಹೇಳಿಲ್ಲ. ಜಲಸಂಪನ್ಮೂಲ ಸಚಿವನಾಗಿರುವ ಕಾರಣ ಕೆಲವರು ಮನೆಗೆ ಬಂದು ಹೋಗುತ್ತಾರೆ. ಯಾರಿಗೂ ಕೂಡ ಬೇಡ ಎನ್ನಲು ಸಾಧ್ಯವಿಲ್ಲ. ನಾನು 17 ಶಾಸಕರ ನಾಯಕನಲ್ಲ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು. ನಮ್ಮಲ್ಲಿ ಯಾರಾದರೂ ಒಡಕು ಸೃಷ್ಟಿಸಲು ಯತ್ನಿಸಿದರೆ ಅವರು ಯಶಸ್ವಿಯಾಗುವುದಿಲ್ಲ. ನಾನು ಯಾರನ್ನೂ ಮಂತ್ರಿ ಮಾಡುವಷ್ಟು ದೊಡ್ಡ ನಾಯಕನಲ್ಲ. ಯೋಗೇಶ್ವರ್ಗೆ ಮಂತ್ರಿ ಸ್ಥಾನ ಕೊಡಿಸುವುದು ನನ್ನ ಜವಾಬ್ದಾರಿ ಅದನ್ನು ಕೊಡಿಸಿಯೇ ತೀರುತ್ತೇನೆ ಎಂದು ವಾಗ್ದಾನ ಮಾಡಿದರು.
ಇಲಾಖೆಯ ಕಾರ್ಯನಿಮಿತ್ತ ದೆಹಲಿಗೆ ಭೇಟಿ ಕೊಟ್ಟಿದ್ದೆ. ಕೇಂದ್ರ ಸಚಿವರನ್ನು ಭೇಟಿಯಾದಂತೆ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದೇನೆ. ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಿ.ಟಿ.ರವಿ ಅವರು ನನ್ನನ್ನು ಆಹ್ವಾನಿಸಿದ್ದರಿಂದ ಹೋಗಿದ್ದೆ. ಇದರಲ್ಲಿ ವಿಶೇಷತೆ ಏನಿಲ್ಲ ಎಂದು ಸ್ಪಷ್ಟನೆ ನೀಡಿದರು.