ಬೆಂಗಳೂರು : ಡಾ. ಬಿ.ಆರ್.ಅಂಬೇಡ್ಕರ್ ಮೆಡಿಕಲ್ ಕಾಲೇಜು (Dr B R Ambedkar medical collage) , ಅಂಬೇಡ್ಕರ್ ದಂತ ವೈದ್ಯಕೀಯ ಕಾಲೇಜು (Dental collage), ಮಾತೃಶ್ರೀ ರಮಾಬಾಯಿ ನರ್ಸಿಂಗ್ ಕಾಲೇಜು (Nursing collage) ಸೇರಿದಂತೆ ಮತ್ತಿತರ ಉನ್ನತ ಶೈಕ್ಷಣಿಕ ವಿದ್ಯಾಸಂಸ್ಥೆಗಳಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ (BJP) ಮುಖಂಡ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.ಈ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿರುವ ಎನ್.ಆರ್.ರಮೇಶ್, ಈ ಕಾಲೇಜುಗಳು ಎಐಸಿಸಿ(AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಅಳಿಯ ಕಾಂಗ್ರೆಸ್ (Congress) ಲೋಕಸಭಾ ಅಭ್ಯರ್ಥಿ ರಾಧಾಕೃಷ್ಣ ಅವರ ಒಡೆತನದಲ್ಲಿದ್ದು, 2012-2017 ರ ಅವಧಿಯಲ್ಲಿ ನೂರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಎಂದಿದ್ದಾರೆ.
ನಾಲ್ಕನೇ ದರ್ಜೆ ನೌಕರನಾಗಿದ್ದ ಅಮಾನುಲ್ಲಾ ಖಾನ್ ಎಂಬ ವ್ಯಕ್ತಿಯನ್ನು ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿದೆ. 2008 ರಿಂದ ಇದುವರೆಗೂ ಮ್ಯಾನೇಜ್ ಮೆಂಟ್ ಕೋಟಾ ಅಡಿಯಲ್ಲಿ ಸಾವಿರಾರು ಅಕ್ರಮ ನಡೆದಿದೆ. ಅನುತ್ತೀರ್ಣ ಮತ್ತು ಅನರ್ಹ ವಿದ್ಯಾರ್ಥಿಗಳಿಂದ 1-2 ಕೋಟಿ ರೂ. ಹಣ ಪಡೆದು, ಸರ್ಕಾರದ ಅನುಮೋದನೆ ಪಡೆಯದ ನಕಲಿ ಕಾಲೇಜುಗಳಿಂದ ಪ್ರಮಾಣ ಪತ್ರ ಕೊಡಿಸಿ, ವೈದ್ಯಕೀಯ ಸೀಟು ಮಾರಿಕೊಳ್ಳಲಾಗಿದೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದಾರೆ.
ಜೊತೆಗೆ, ಇಂಟರ್ನಲ್ ಅಂಕಗಳನ್ನು ನೀಡಲು ಲಕ್ಷಾಂತರ ರೂ. ಲಂಚ ಪಡೆಯಲಾಗುತ್ತಿದೆ. ಅಲ್ಲದೇ ಕಾಮೆಡ್ -ಕೆ, ಮತ್ತಿತರ ಪರೀಕ್ಷೆಗಳನ್ನು ಬರೆದಂತೆ ದಾಖಲೆ ಸೃಷ್ಟಿಸಿ ನೂರಾರು ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಲಾಗಿದೆ. ಈ ಬಗ್ಗೆ ಹಲವು ರಾಜ್ಯಪಾಲರು , ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಎನ್.ಆರ್. ರಮೇಶ್ ದೂರಿದ್ದಾರೆ.