ಬೆಳಗಾವಿ: ಈ ಅಧಿವೇಶನದಲ್ಲೂ ವಿಧಾನಪರಿಷತ್ ಕಲಾಪ ಅಧಿಕೃತ ವಿರೋಧ ಪಕ್ಷದ ನಾಯಕನಿಲ್ಲದೆಯೇ ನಡೆಯುವ ಸಾಧ್ಯತೆ ಇದೆ.
ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಆರ್. ಅಶೋಕ ಅವರನ್ನು ಆಯ್ಕೆ ಮಾಡಿದಾಗಲೇ, ಪರಿಷತ್ತಿಗೂ ಆಯ್ಕೆಯಾಗಲಿದೆ ಎಂದು ಹೇಳಲಾಗಿತ್ತು. ಬೆಳಗಾವಿ ಅಧಿವೇಶನದ ಎರಡು ದಿನ ಮೊದಲು ಪಕ್ಷದ ವರಿಷ್ಠರು ಹೆಸರು ಸೂಚಿಸಬಹುದು ಎನ್ನಲಾಗಿತ್ತು.
ಬಿಜೆಪಿ ರಾಜ್ಯ ನಾಯಕರು ಮೂವರ ಹೆಸರುಗಳನ್ನು ದೆಹಲಿಗೆ ಕಳುಹಿಸಿದ್ದು, ಯಾವುದಕ್ಕೂ ವರಿಷ್ಠರು ಒಪ್ಪಿಗೆ ನೀಡಿಲ್ಲ. ಈ ಬಾರಿಯೂ ಆಯ್ಕೆ ಆಗುವ ಸಾಧ್ಯತೆ ಇಲ್ಲ ಎಂದು ಬಿಜೆಪಿಯ ನಾಯಕರೊಬ್ಬರು ತಿಳಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ಬಳಿಕ ರಾಜ್ಯ ಬಿಜೆಪಿ ನಾಯಕರ ಬಗ್ಗೆ ಮುನಿಸಿಕೊಂಡಿದ್ದ ವರಿಷ್ಠರು ರಾಜ್ಯ ಘಟಕದ ಅಧ್ಯಕ್ಷ ಸ್ಥಾನ, ವಿಧಾನಸಭೆ ವಿರೋಧಪಕ್ಷದ ಸ್ಥಾನವನ್ನು ಆರು ತಿಂಗಳಾದರೂ ಆಯ್ಕೆ ಮಾಡಿರಲಿಲ್ಲ. ಇದು ಆಡಳಿತಾರೂಢ ಕಾಂಗ್ರೆಸ್ನಿಂದ ಟೀಕೆಗೂ ಒಳಗಾಗಿತ್ತು.
ನವೆಂಬರ್ನಲ್ಲಿ ಅಧ್ಯಕ್ಷರ ನೇಮಕ ಮತ್ತು ವಿಪಕ್ಷ ನಾಯಕರ ಆಯ್ಕೆ ನಡೆಯಿತು. ಇದರ ಬೆನ್ನಲ್ಲೇ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ, ಎರಡೂ ಸದನಗಳ ಉಪನಾಯಕ ಮತ್ತು ಸಚೇತಕರ ಸ್ಥಾನಕ್ಕೂ ಆಯ್ಕೆ ಆಗಬಹುದು ಎಂಬ ನಿರೀಕ್ಷೆ ಇತ್ತು.
ವಿಧಾನಪರಿಷತ್ತಿನಲ್ಲಿ ಬಿಜೆಪಿ 34 ಸದಸ್ಯ ಬಲವನ್ನು ಹೊಂದಿದೆ. ವಿರೋಧಪಕ್ಷದ ನಾಯಕನ ಸ್ಥಾನಕ್ಕೆ ಕೋಟ ಶ್ರೀನಿವಾಸಪೂಜಾರಿ, ಶಶೀಲ್ ನಮೋಶಿ, ರಘುನಾಥರಾವ್ ಮಲ್ಕಾಪುರೆ ಹೆಸರುಗಳನ್ನು ಸೂಚಿಸಿ ಕಳುಹಿಸಲಾಗಿತ್ತು ಎಂದು ಮೂಲಗಳು ಹೇಳಿವೆ.