ಚನ್ನಮ್ಮನ ಕಿತ್ತೂರು: ‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಶ್ರೀಮಂತ ಇತಿಹಾಸವಿದೆ. ಅದನ್ನು ಸಾಹಿತಿ, ಕವಿಗಳು ಅಧ್ಯಯನ ಮಾಡಬೇಕು. ನಿರಂತರ ಓದುವಿಕೆ ಶ್ರೇಷ್ಠ ಸಾಹಿತ್ಯ ರಚನೆಗೆ ಸಹಕಾರಿ’ ಎಂದು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಇಲ್ಲಿಯ ಕಲ್ಮಠದ ಶಂಕರ ಚಂದರಗಿ ಸಭಾಭವನದಲ್ಲಿ ಸುವರ್ಣ ಕರ್ನಾಟಕ-50 ಸಂಭ್ರಮದ ಅಂಗವಾಗಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕವಿಗೋಷ್ಠಿಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಕುವೆಂಪು ಅವರ ಸಾಹಿತ್ಯದಲ್ಲಿ ನಿಸರ್ಗ ಶ್ರೀಮಂತಿಕೆ ಕಾಣುತ್ತದೆ. ಬೇಂದ್ರೆ ಕಾವ್ಯದಲ್ಲಿ ಜೀವನ ದರ್ಶನ ಕಾಣುತ್ತದೆ. ಮನದಾಳದಲ್ಲಿ ಹೆಪ್ಪುಗಟ್ಟಿದ ಭಾವನೆಗಳಿಗೆ ಶಕ್ತಿಯುತ ಶಬ್ದಗಳನ್ನು ತುಂಬಿ ಸಾಹಿತ್ಯ ರಚನೆಯನ್ನು ಅವರು ಮಾಡಿದರು’ ಎಂದು ಬಣ್ಣಿಸಿದರು.
ಆಶಯ ನುಡಿಗಳನ್ನಾಡಿದ ಶಿಕ್ಷಕ ಮಂಜುನಾಥ ಕಳಸಣ್ಣವರ, ‘ಉದಯೋನ್ಮುಖ ಕವಿಗಳು ಕಾವ್ಯ ಕ್ಷೇತ್ರಕ್ಕೆ ಹೆಚ್ಚಾಗಿ ಬರಬೇಕು. ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಹೆಚ್ಚು ಬೆಳಕು ಚೆಲ್ಲಬೇಕು’ ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ. ಎಸ್. ಬಿ. ದಳವಾಯಿ ಮಾತನಾಡಿ, ‘ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಲು 60 ಕವಿಗಳು ದೂರದ ಊರುಗಳಿಂದ ಆಗಮಿಸಿದ್ದಾರೆ. ಅವರ ಆಸಕ್ತಿ ಇಲ್ಲಿ ಹೆಚ್ಚು ಎದ್ದು ಕಾಣುತ್ತದೆ’ ಎಂದು ಹೇಳಿದರು.