ಬೆಂಗಳೂರು: ಕೊರೊನಾ ಕಂಟ್ರೋಲ್ಗೆ ಬಂದಿದೆ. ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ. ರಾಜ್ಯದಲ್ಲಿ ಅಕ್ಟೋಬರ್ ಪ್ರಾರಂಭಕ್ಕೆ 10 ಸಾವಿರ ಇದ್ದ ಸೋಂಕಿತರ ಸಂಖ್ಯೆ ಈಗ 3 ಸಾವಿರದ ಅಸುಪಾಸಿನಲ್ಲಿದೆ. ಆದರೆ ಕೊರೊನಾ ಬಂದು ಗುಣಮುಖ ಆದವರಲ್ಲಿಯೂ ಈಗ ಸೋಂಕು ಹೆಚ್ಚಾಗಿದೆ. ಹೀಗಾಗಿ ಒಮ್ಮೆ ಬಂದು ರಿಕವರಿ ಅದವರಿಗೂ ಕೊರೊನಾ ಮತ್ತೆ ಕಾಟ ಕೊಡುತ್ತಿದೆ ಎಂಬ ವಿಚಾರವೊಂದು ಬಯಲಾಗಿದೆ.
ಮೊದಮೊದಲು ತೀರಾ ಕಡಿಮೆ ಸಂಖ್ಯೆಯಲ್ಲಿ ಸೋಂಕು ಮತ್ತೆ ಕಾಣಿಸಿಕೊಳ್ಳುತ್ತಿತ್ತು. ಈಗ ನಮ್ಮ ರಾಜ್ಯದಲ್ಲಿ ಸೋಂಕು ಕಾಣಿಸಿಕೊಂಡರಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುವವರ ಸಂಖ್ಯೆ ಶೇ.5 ರಷ್ಟು ಇದೆ. ಕೊರೊನಾದಿಂದ ಹುಷರಾಗಿದ್ರೂ ಮತ್ತೆ ಕೊರೊನಾ ಬರುವವರ ಸಂಖ್ಯೆ ಶೇ.5ರಷ್ಟು ಆಗಿರೋದು ಆಘಾತಕಾರಿ ವಿಷಯವಾಗಿದೆ. ಈ ಆಘಾತಕಾರಿ ಅಂಶವನ್ನ ತಜ್ಞರು ಆರೋಗ್ಯ ಸಚಿವರಿಗೆ ತಿಳಿಸಿದ್ದಾರೆ. ಮೊದಲ ಬಾರಿಗೆ ಸೋಂಕಿನ ಲಕ್ಷಣವಿಲ್ಲದೇ ಇದ್ದವರಿಗೆ ಎರಡನೇ ಬಾರಿಗೆ ಸೋಂಕು ಬಂದರೆ ಹೆಚ್ಚು ತೊಂದ್ರೆ ಆಗೋದು ಪಕ್ಕಾ ಆಗಿದೆ.
ಸರ್ಕಾರಕ್ಕೆ ತಜ್ಞರು ಸಲಹೆ: ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಮತ್ತು ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡಬೇಕು. ಕೋವಿಡ್ ಸೋಂಕಿಗೊಳಗಾಗಿ ಗುಣಮುಖರಾದವರ ಮೇಲೆ ನಿಗಾ ಇರಿಸಲು ತೀರ್ಮಾನಿಸಬೇಕು. ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ, ವಿಕ್ಟೋರಿಯಾ, ಬೌರಿಂಗ್, ಕೆ.ಸಿ ಜನರಲ್ ಆಸ್ಪತ್ರೆಗಳಲ್ಲಿ ಪೋಸ್ಟ್ ಕೋವಿಡ್ ಕೇಂದ್ರ ಮತ್ತು ಪುನರ್ವಸತಿ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ಅಲ್ಲದೆ ಎರಡನೇ ಬಾರಿಗೆ ಸೋಂಕು ಬರುವ ಬಗ್ಗೆಯೂ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ. ಬೆಂಗಳೂರಿನ 8 ವಲಯಗಳಲ್ಲಿಯೂ ಕೊರೋನೋತ್ತರ ಕೋವಿಡ್ ಕೇರ್ ಸೆಂಟರ್ ಸ್ಥಾಪನೆ ಸಾಧ್ಯತೆ. ಈ ಕೊರೊನೋತ್ತರ ಕೋವಿಡ್ ಕೇರ್ ಸೆಂಟರ್ನಲ್ಲಿ ಉಚಿತ ತಪಾಸಣೆ ನಡೆಸಬೇಕು.