ಅಮೃತಸರ (ಪಂಜಾಬ್): ಕೌನ್ ಬನೇಗಾ ಕರೋಡ್ಪತಿ ಕಾರ್ಯಕ್ರಮ ಈಗಾಗಲೇ ಎಲ್ಲರಿಗೂ ತಿಳಿದಿರುವ ಕಾರ್ಯಕ್ರಮ.
ಇದರಲ್ಲಿ 15 ಪ್ರಶ್ನೆಗೆ ಸರಿಯಾದ ಉತ್ತರ ಕೊಟ್ಟರೆ 7 ಕೋಟಿ ಗೆಲ್ಲುವ ಅವಕಾಶ ಇದೆ. ಆದರೆ ಇಲ್ಲಿಯ ವರೆಗೆ ತಲುಪಲು 14 ಪ್ರಶ್ನೆಗಳನ್ನು ದಾಟಬೇಕಿದೆ. 15ನೇ ಸರಣಿಯ ಕೌನ್ ಬನೇಗಾ ಕರೋಡ್ಪತಿಯಲ್ಲಿ ಪಂಜಾಬ್ನ ಖಲ್ರಾ ಎಂಬ ಸಣ್ಣ ಹಳ್ಳಿಯಿಂದ ಬಂದಿರುವ ಜಸ್ಕರನ್ ಸಿಂಗ್ ಕೋಟಿ ಗೆದ್ದಿದ್ದಾರೆ. ಈ ಆವೃತ್ತಿಯ ಮೊದಲ ಕೋಟಿ ಬಹುಮಾನ ಇದಾಗಿದೆ.
ಮಂಗಳವಾರದ ಸಂಚಿಕೆಯಲ್ಲಿ ಜಸ್ಕರನ್ ಸಿಂಗ್ 7 ಕೋಟಿಯ ಅಂತಿಮ ಪ್ರಶ್ನೆಯನ್ನು ಎದುರಿಸಿದರು. ಆದರೆ, ಅದಕ್ಕೆ ಉತ್ತರ ತಿಳಿಯದೇ ಹಿಂದೆ ಸರಿದ ಕಾರಣ 1 ಕೋಟಿ ತಮ್ಮದಾಗಿಸಿ ಕೊಂಡಿದ್ದಾರೆ. ಅಮಿತಾಬ್ ಬಚ್ಚನ್ ಮಂಗಳವಾರ ಜಸ್ಕರನ್ ಸಿಂಗ್ಗೆ ಕೇಳಿದ 7 ಕೋಟಿ ರೂ ಪ್ರಶ್ನೆ ಹೀಗಿದೆ.. “ಪದ್ಮ ಪುರಾಣದ ಪ್ರಕಾರ, ಜಿಂಕೆಯ ಶಾಪದಿಂದ ನೂರು ವರ್ಷಗಳ ಕಾಲ ಯಾವ ರಾಜ ಹುಲಿಯಾಗಿ ಬದುಕಿದ್ದ? ಆಯ್ಕೆಗಳೆಂದರೆ: ಎ) ಕ್ಷೇಮಧೂರ್ತಿ ಬಿ) ಧರ್ಮದತ್ತ ಸಿ) ಮಿತಧ್ವಜ ಡಿ) ಪ್ರಭಂಜನ.
ಜಸ್ಕರನ್ ಈಗಾಗಲೇ ₹1 ಕೋಟಿಯ ಪ್ರಶ್ನೆಗೆ ಯಶಸ್ವಿಯಾಗಿ ಉತ್ತರಿಸುವ ಮೂಲಕ ಋತುವಿನ ಮೊದಲ ಕೋಟ್ಯಾಧಿಪತಿಯಾಗಿದ್ದರು. 14 ಪ್ರಶ್ನೆಗಳಿಗೆ ಉತ್ತರಿಸಿ 1 ಕೋಟಿ ಗೆದ್ದಿದ್ದ, ಜಸ್ಕರನ್ ಸಿಂಗ್ ಉತ್ತರ ಸರಿಯಾಗಿ ತಿಳಿದಿರದ ಕಾರಣ ಈ ಪಶ್ನೆಯಿಂದ ಹಿಂದೆ ಸರಿದರು. ಹೀಗಾಗಿ 1 ಕೋಟಿ ಅವರ ಪಾಲಿಗಾಯಿತು. ಈ ಪ್ರಶ್ನೆಯ ಸರಿಯಾದ ಉತ್ತರ ಡಿ) ಪ್ರಭಂಜನ ಆಗಿತ್ತು.
ಕಾರ್ಯಕ್ರಮದಲ್ಲಿ ತನ್ನನ್ನು ಸ್ಪರ್ಧಿ ಎಂದು ಪರಿಚಯಿಸಿಕೊಂಡ ಜಸ್ಕರನ್, ಪಂಜಾಬ್ನ ಖಲ್ರಾ ಗ್ರಾಮದ ಕೆಲವೇ ಕೆಲವು ಪದವೀಧರರಲ್ಲಿ ತಾನೂ ಒಬ್ಬ ಎಂದು ಹೇಳಿದರು. ಅವರು ಪ್ರಸ್ತುತ ಮುಂದಿನ ವರ್ಷ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಅವರು ತಮ್ಮ ಬಹುಮಾನದ ಹಣವನ್ನು ತಮ್ಮ ತಂದೆಗೆ ನೀಡುವುದಾಗಿ ಹೇಳಿದರು ಮತ್ತು ಇದು ಅವರ ಜೀವನದ ಮೊದಲ ಸಂಭಾವನೆಯಾಗಿದೆ ಎಂದು ತಿಳಿಸಿದರು.
ಜಸ್ಕರನ್ ಸಿಂಗ್ ಡಿಎವಿ ಕಾಲೇಜಿನಲ್ಲಿ ಬಿಎಸ್ಸಿ (ಅರ್ಥಶಾಸ್ತ್ರ) ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರು. ಊರಿಗೆ ತಲುಪಿದ ಕೂಡಲೇ ಜಸ್ಕರನ್ ಸಿಂಗ್ ತಾವು ಓದುತ್ತಿದ್ದ ಕಾಲೇಜಿಗೆ ಭೇಟಿ ಕೊಟ್ಟಿದ್ದಾರೆ. ಕಾಲೇಜಿನಲ್ಲಿ ಅವರನ್ನು ಕಾಲೇಜು ಶಿಕ್ಷಕರು ಆತ್ಮೀಯ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಅಮರ್ದೀಪ್ ಗುಪ್ತಾ ಮತ್ತು ಎಲ್ಲಾ ಸಿಬ್ಬಂದಿಗಳು ಸಿಹಿ ತಿನ್ನಿಸಿ ಸಂಭ್ರಮ ಹಂಚಿಕೊಂಡರು.