ಶಿವಮೊಗ್ಗ: ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯ ಮಾಜಿ ಸಚಿವ ಕೆಎಸ್ ಈಶ್ವರಪ್ಪರಿಗೆ ಕ್ಲೀನ್ ಚಿಟ್ ನೀಡಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದ ಕೆಲಸ ಮಾಡಲು ಇಂದಿನ ನ್ಯಾಯಾಲಯದ ತೀರ್ಪು ಪ್ರೇರಣೆ ಕೊಟ್ಟಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಚೌಡೇಶ್ವರಿ ನನ್ನನ್ನು ಇವತ್ತು ನಿರ್ದೋಷಿ ಅಂತ ಹೇಳಿ ನ್ಯಾಯ ಕೊಟ್ಟಿದ್ದಾಳೆ. ನನ್ನಲ್ಲಿ ಮತ್ತಷ್ಟು ಆ ದೈವ ಭಕ್ತಿ ನನಗೆ ಹೆಚ್ಚಿಗೆ ಆಗಲು ಅವಕಾಶ ಆಯಿತು. ಆ ತಾಯಿಯ ಆಶೀರ್ವಾದದಿಂದ ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ದೇಶದ ಕೆಲಸವನ್ನು ಹೆಚ್ಚು ಮಾಡಲು ಇವತ್ತಿನ ನ್ಯಾಯಾಲಯದ ತೀರ್ಪು ಸ್ಪೂರ್ತಿ ಆಗಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದರು.
ಗುತ್ತಿಗೆದಾರ ಸಂತೋಷ ಆತ್ಮಹತ್ಯೆ ಪ್ರಕರಣದಲ್ಲಿ ಕೆಎಸ್ ಈಶ್ವರಪ್ಪನವರಿಗೆ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಕ್ಲೀನ್ ಚಿಟ್ ವಿಚಾರವಾಗಿ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಂಬಿದ ಮನೆ ದೇವ್ರು ಚೌಡೇಶ್ವರಿ ನ್ಯಾಯ ಕೊಟ್ಟಿದ್ದಾಳೆ. ದೈವಭಕ್ತನಾದ ನನಗೆ ಮತ್ತಷ್ಟು ದೇವರ ಮೇಲೆ ನಂಬಿಕೆ ಹೆಚ್ಚಾಗಿದೆ ಎಂದರು.
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು: ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈಶ್ವರಪ್ಪ ನಿರ್ದೋಷಿ ಎಂದು ತೀರ್ಪು ಬರುತ್ತಿದಂತೆ ಶಾಸಕ ಚನ್ನಬಸಪ್ಪ ಸೇರಿದಂತೆ ಪಕ್ಷದ ಕಾರ್ಯಕರ್ತರು ಬಿಜೆಪಿ ಜಿಲ್ಲಾ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿಡಿ ಮೇಘರಾಜ್, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಡಿಎಸ್ ಅರುಣ್ ಮಹಾನಗರ ಪಾಲಿಕೆ ಮೇಯರ್ ಶಿವಕುಮಾರ್ ಸೇರಿದಂತೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.