ಚಿಕ್ಕಬಳ್ಳಾಪುರ: ಕಾಂಗ್ರೆಸ್ನಲ್ಲಿದ್ದು ಪಕ್ಷದ್ರೋಹ ಮಾಡಿದವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ತಾಲೂಕು ಕಚೇರಿಯಲ್ಲಿ ನೂತನ ಶಾಸಕರ ಕಚೇರಿ ಪೂಜೆ ಹಮ್ಮಿಕೊಂಡಿದ್ದ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಇದ್ದುಕೊಂಡು ಪಕ್ಷದ್ರೋಹ ಮಾಡಿದವರನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ ಎಂದರು.
ಈ ಹಿಂದೆ ಇದ್ದ ಶಾಸಕರು ಯಾವುದೇ ಫೈಲ್ ಬಂದ್ರೂ ಸಹ ಜಿಲ್ಲಾಧಿಕಾರಿಗಳ ಬಳಿ ತಡೆ ಹಿಡಿಯುತ್ತಿದ್ದರು. ಆದರೆ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟು ಉತ್ತಮ ಆಡಳಿತ, ಅಭಿವೃದ್ಧಿ ಮಾಡುವಂತೆ ತಿಳಿಸಿದೆ. ಅದರಂತೆ ನಾನು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ನಿರ್ಧಾರ ಮಾಡಿದ್ದೇನೆ ಎಂದರು.
ಮುಂದುವರೆದು ಮಾತನಾಡಿ, ಕೆಲವರು ಚುನಾವಣಾ ಸಮಯದಲ್ಲಿ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಹಣ ನೀಡಿದ್ದಾರೆ ಎನ್ನುವ ಕಾರಣಕ್ಕೆ ಅವರ ಜೊತೆಗಿದ್ದು ಕಾಂಗ್ರೆಸ್ಗೆ ದ್ರೋಹ ಬಗೆದಿದ್ದಾರೆ. ಅಂಥವರನ್ನು ನಾನು ಕ್ಷಮಿಸುವುದಿಲ್ಲ. ಅವರು ಬಿಜೆಪಿಯಲ್ಲಿ ಇದ್ದುಕೊಂಡು ನಾನು ನಿಮಗೆ ವೈಯಕ್ತಿಕವಾಗಿ ಬೆಂಬಲ ಸೂಚಿಸಿರುವುದಾಗಿ ಹೇಳಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಬರುವುದಾಗಿ ನನಗೆ ಪ್ರತಿನಿತ್ಯ ಕರೆ ಮಾಡುತ್ತಿದ್ದಾರೆ. ಅಂತಹವರನ್ನು ನಂಬುವುದಿಲ್ಲ. ಪಕ್ಷದ ವರಿಷ್ಠರು ಹಾಗೂ ಜಿಲ್ಲಾ ಅಧ್ಯಕ್ಷರ ಆದೇಶದಂತೆ ಮುಂದಿನ ನಡೆಯನ್ನು ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಓಲೈಕೆ ರಾಜಕೀಯ ಸಾಧ್ಯವಿಲ್ಲ: ಚಿಕ್ಕಬಳ್ಳಾಪುರ ಕ್ಷೇತ್ರದ ಅಭಿವೃದ್ಧಿ ಮಾಡಲು ನನಗೆ ಯಾವುದೇ ಅಧಿಕಾರದ ಆಸೆ ಇಲ್ಲ. ಜಿಲ್ಲೆಯ ಅಭಿವೃದ್ಧಿಗೆ 20-30 ವರ್ಷ ಅಧಿಕಾರ ಬೇಕಾಗಿಲ್ಲ. ಅಧಿಕಾರ ಬೇಕಾದರೆ ಓಲೈಕೆ ರಾಜಕೀಯ ಮಾಡಬೇಕು, ನನ್ನಿಂದ ಅದು ಆಗುವುದಿಲ್ಲ. ನಾನು ಇರುವಂತಹ 5 ವರ್ಷಗಳಲ್ಲಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ. ನನ್ನ ಅಭಿವೃದ್ಧಿ ಇಷ್ಟವಾದರೆ ಜನತೆ ಮತ್ತೆ ನನ್ನನ್ನು ಆಯ್ಕೆ ಮಾಡುತ್ತಾರೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿ ಮಾಡುವಂತೆ ನಮ್ಮ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದ್ದಾರೆ. ನಾನು ಶಾಸಕನಾಗಲು ಮಾಜಿ ಸಚಿವ ಶಿವಶಂಕರ್ ರೆಡ್ಡಿ ಹಾಗೂ ಜಿಲ್ಲಾಧ್ಯಕ್ಷರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರಿಗೆ ನಾನು ಗೌರವ ಕೊಡುತ್ತೇನೆ. ಕ್ಷೇತ್ರದಲ್ಲಿ 90 ಸಾವಿರ ಜನ ನಾನು ಅಧಿಕಾರಕ್ಕೆ ಬರಲು ಆಶೀರ್ವಾದ ಮಾಡಿದ್ದಾರೆ ಎಂದು ತಿಳಿಸಿದರು.