ಹೆಳವರಹುಂಡಿ/ಹನೂರು: ಮೈಸೂರು ಜಿಲ್ಲೆಯ ವರುಣಾ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ವ್ಯಾಪ್ತಿಯಲ್ಲಿ ಮಂಗಳವಾರ ಚುನಾವಣ ಪ್ರಚಾರ ನಡೆಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರು, ಬಿಜೆಪಿ ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದರಲ್ಲದೆ, ರಾಜ್ಯ ಬಿಜೆಪಿ ಸರಕಾರದ ರಚನೆಯೇ ದುರಾಸೆ, ಆಮಿಷದಿಂದ ಕೂಡಿತ್ತು.
ಇಂತಹ ಸರಕಾರವನ್ನು ಈ ಚುನಾವಣೆಯಲ್ಲಿ ಕಿತ್ತೂಗೆಯಬೇಕು ಎಂದು ಕರೆ ನೀಡಿದರು.
ತಿ.ನರಸೀಪುರದ ಹೆಳವರಹುಂಡಿ ಗ್ರಾಮದಲ್ಲಿ ಮಾತನಾಡಿದ ಪ್ರಿಯಾಂಕಾ, ರಾಜ್ಯ ಬಿಜೆಪಿ ಸರಕಾರ 1.5 ಲಕ್ಷ ಕೋಟಿ ರೂ. ಲೂಟಿ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರಲ್ಲದೆ, ಈ ಹಣದಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಡಬಹುದಿತ್ತು, ಆಸ್ಪತ್ರೆಗಳನ್ನು ನಿರ್ಮಿಸಬಹುದಿತ್ತು, 750 ಕಿ.ಮೀ. ಮೆಟ್ರೋ ರೈಲು ಹಳಿಯನ್ನು ನಿರ್ಮಿಸಬಹುದಿತ್ತು, ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಿತ್ತು ಎಂದು ಹೇಳಿದರು.
ಮಹಾತ್ಮರ ಆಶೀರ್ವಾದ ಬೇಕು
ಪ್ರಧಾನಿ ನರೇಂದ್ರ ಮೋದಿ ಅವರ ಆಶೀರ್ವಾದದಿಂದ ತಪ್ಪಿಸಿಕೊಳ್ಳಬಾರದೆಂದರೆ ಏನರ್ಥ? ಬಸವೇಶ್ವರರು, ನಾರಾಯಣಗುರು ಅವರಂತಹ ಮಹಾತ್ಮರ ಆಶೀರ್ವಾದ ನಮಗೆ ಮುಖ್ಯವಾಗಬೇಕು. ಚುನಾವಣೆಯಲ್ಲಿ ಮತ ಯಾಚಿಸುವಾಗ ನರೇಂದ್ರ ಮೋದಿ ಅವರ ಆಶೀರ್ವಾದ ಎಂದರೆ ಅದು ಕನ್ನಡ ನಾಡಿಗೆ ಮಾಡಿದ ಅಪಮಾನ ಎಂದರು.
ನಂದಿನಿ ದುರ್ಬಲಗೊಳಿಸಲು ಬಿಜೆಪಿ ಯತ್ನ
ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, ಈ ರಾಜ್ಯದ ನಂದಿನಿಯನ್ನು ದುರ್ಬಲಗೊಳಿಸಿ ಗುಜರಾತ್ನ ಅಮುಲ್ ಸಂಸ್ಥೆಯ ಮಾರಾಟ ಹೆಚ್ಚಳ ಮಾಡಿಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಹಾಲಿನ ಉತ್ಪಾದನೆ ಹೆಚ್ಚಾಗಿ ಆ ಹಾಲನ್ನು ಸರಕಾರಿ ಶಾಲೆ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿ ವಿತರಿಸಲಾಗುತ್ತಿತ್ತು. ಆದರೆ ಬಿಜೆಪಿ ಸರಕಾರ ನಂದಿನಿ ಹಾಲಿನ ಕೊರತೆಯಿದೆ ಎಂಬ ಕಾರಣ ನೀಡುತ್ತಿದೆ. ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಉತ್ಪಾದನೆಯಾಗುತ್ತಿದ್ದ ಹಾಲು ಈಗ ಎಲ್ಲಿ ಹೋಗುತ್ತಿದೆ ಎಂದು ಕಿಡಿಕಾರಿದರು.