ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ಈಗ ಕೊರೊನಾ ಆತಂಕ ಎದುರಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಸಿಡಿ ಕಾಲೇಜ್ನ ಪ್ರಾಧ್ಯಾಪಕಿಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲೇ ಆತಂಕ ಎದುರಾಗಿದ್ದು, ಇದರ ಬೆನ್ನಲ್ಲೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 8 ದಿನಗಳ ರಜೆ ಘೋಷಿಸಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆಯುವ ಕೆಸಿಡಿ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರಿಗೆ ಎರಡು ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಇವರು ಸೋಂಕು ದೃಢವಾಗುವ ಮುಂಚೆ ವಿಶ್ವವಿದ್ಯಾಲಯದ ಮೂರು ವಿಭಾಗಗಳಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಿದ ಪಿಎಚ್ಡಿ, ಅಕಾಡೆಮಿಕ್ ಹಾಗೂ ಡಿಪಿಆರ್ ಸೆಕ್ಷನ್ ಗಳನ್ನು ಸೀಲ್ಡೌನ್ ಮಾಡಲಾಗಿದೆ.
ಕೊರೊನಾ ಭೀತಿ ಹಿನ್ನೆಲೆ ರಜೆಗೆ ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿತ್ತು. ಸರ್ಕಾರ ಇವತ್ತೇ ಅನುಮೋದನೆ ಸಹ ನೀಡಿದೆ. ಹೀಗಾಗಿ ಜುಲೈ 15ರ ವರೆಗೆ ವಿಶ್ವವಿದ್ಯಾಲಯಕ್ಕೆ ರಜೆ ಘೋಷಿಸಲಾಗಿದೆ. ಸೋಂಕಿತರು ಕವಿವಿಗೆ ಭೇಟಿ ನೀಡಿದ ನಂತರ ರಜೆ ಘೋಷಣೆ ಮಾಡುವಂತೆ ಇಲ್ಲಿರುವ ಸಿಬ್ಬಂದಿ ವರ್ಗ ಕವಿವಿ ಆಡಳಿತ ಮಂಡಳಿಗೆ ಮನವಿ ಮಾಡಿತ್ತು.