ಬೆಂಗಳೂರು: ಐಪಿಎಎಸ್ ಅಧಿಕಾರಿ ಡಿ.ರೂಪಾ ಮೌದ್ಗಿಲ್ ವಿಧಾನ ಸೌಧದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರನ್ನು ಭೇಟಿಯಾಗಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮೂರು ಪುಟಗಳ ದೂರು ನೀಡಿದ್ದಾರೆ.
ಇದಕ್ಕೂ ಮೊದಲು ರೋಹಿಣಿ ಸಿಂಧೂರಿ, ರೂಪಾ ಮೌದ್ಗಿಲ್ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ, ನನ್ನ ಮೇಲೆ ಡಿ.ರೂಪ ಮೌದ್ಗಿಲ್ ಅವರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ.
ಹೆಚ್ಚಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿದ್ದರು. ಈ ಪ್ರತಿಕ್ರಿಯಿಸಿದ ರೂಪಾ, ರೋಹಿಣಿ ನನ್ನ ಮೇಲೆ ದೂರು ನೀಡಿದ್ದಾರೆ. ಆದರೆ ಇದುವರೆಗೆ ಎಫ್ಐಆರ್ ದಾಖಲಾಗಿಲ್ಲ ಎಂದು ಹೇಳಿದರು.
ರೋಹಿಣಿ ಸಿಂಧೂರಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರು ಎಂದು ಹೇಳಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿಯವರಿಗೆ ದೂರು ನೀಡುತ್ತಿದ್ದೇನೆ. ನನ್ನ ಮೇಲೆ ಏನೂ ಆರೋಪ ಇಲ್ಲ ಎಂದು ಹೇಳಿದ್ದಾರೆ. ಇದೀಗ ಅವರ ಮೇಲಿರುವ ಆರೋಪಗಳ ದಾಖಲೆ ತಂದಿದ್ದೇನೆ. ನನಗೆ ಅವರ ಮೇಲೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದರು.
ರೋಹಿಣಿ ಸಿಂಧೂರಿ ಸರ್ಕಾರಕ್ಕೆ ಈಗಾಗಲೇ ದೂರು ಕೊಟ್ಟಿದ್ದಾರೆ. ಸದ್ಯ ನಾನು ಸರ್ಕಾರಕ್ಕೆ ದಾಖಲೆ ಒಪ್ಪಿಸಲು ಬಂದಿದ್ದೇನೆ. ಅವರ ಖರ್ಚು, ಮನೆ ನಿರ್ವಹಣೆ ಖರ್ಚು, ಜರ್ಮನಿಂದ ಅವರದ್ದಲ್ಲದ ಮನೆಗೆ ತರಿಸಿಕೊಂಡ ಕೆಲ ವಸ್ತುಗಳ ಮೊತ್ತ ಸೇರಿದಂತೆ ಅವರ ಸಂಬಳದ ಬಗ್ಗೆ ಪ್ರಶ್ನೆ ಮಾಡಿ ದೂರು ನೀಡಿದ್ದೇನೆ. ಜತೆಗೆ ಲೋಕಾಯುಕ್ತಕ್ಕೂ ತನಿಖೆ ಮಾಡುವಂತೆ ಸೂಚಿಸಿದ್ದೇನೆ ಎಂದು ರೂಪ ಮೌದ್ಗೀಲ್ ಹೇಳಿದರು.
ಕರೊನಾ ಸಮಯದಲ್ಲಿ ನಿರ್ಮಾಣವಾದ ಸ್ವಿಮ್ಮಿಂಗ್ ಪೂಲ್, ಜಾಲಹಳ್ಳಿಯಲ್ಲಿ ನಿರ್ಮಾಣವಾದ ಕಟ್ಟಡ, ಲೋಕಾಯುಕ್ತ ಕಚೇರಿಗೆ ರವಿಚಂದ್ರೇಗೌಡ ನೀಡಿರುವ ದೂರು, ತಿರುಪತಿಯಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಭವನದ 10 ಕೋಟಿ ಟೆಂಡರ್, ಮೈಸೂರಿನ ಅಡ್ಮಿನಿಸ್ಟ್ರೇಶನ್ ಟ್ರೈನಿಂಗ್ ಸಂಸ್ಥೆ ನೀಡಿರುವ ದೂರು, ಅಡ್ಮಿನಿಸ್ಟ್ರೇಶನ್ನಿಂದ ಕೆಲ ವಸ್ತುಗಳನ್ನು ಮೈಸೂರಿನ ಮನೆಗೆ ತೆಗೆದುಕೊಂಡು ಹೋದ ಆರೋಪ, ರೋಹಿಣಿ ವಿರುದ್ಧ ಐಎಎಸ್ ಹರ್ಷಾ ಗುಪ್ತಾ ನೀಡಿರುವ ಎರಡು ರಿಪೋರ್ಟ್, ಮಾಜಿ ಸಚಿವ ಸಾರಾ ಮಹೇಶ್ ಸದನದಲ್ಲಿ ರೋಹಿಣಿ ವಿರುದ್ಧ ಮಾತನಾಡಿದ್ದರ ಬಗ್ಗೆ ಸತ್ಯಾಸತ್ಯತೆ ಸೇರಿದಂತೆ ಏಳು ಪ್ರಮುಖ ಆರೋಪಗಳನ್ನು ಮಾಡಿ ಹೊಸದಾಗಿ ವಿಚಾರಣೆ ನಡೆಸುವಂತೆ ರೂಪಾ ಮೌದ್ಗಿಲ್ ಆಗ್ರಹಿಸಿದ್ದಾರೆ.
ರೋಹಿಣಿ ಸಿಂಧೂರಿ ಸದ್ಯ ಕಮಿಷನರ್ ಆಗಿರುವ ಮುಜರಾಯಿ ಇಲಾಖೆಯಲ್ಲಿ ಹತ್ತು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಟೆಂಡರ್ ಒಂದನ್ನು ಕೊಟ್ಟಿದ್ದಾರೆ. ಅಲ್ಲದೆ ಮೈಸೂರಿನ ಕಚೇರಿಯ ವಸ್ತುಗಳು ತೆಗೆದುಕೊಂಡು ಹೋಗಿದ್ದಾರೆ. ಇದರ ಬಗ್ಗೆ ವಾಟ್ಸಪ್ನಲ್ಲಿ ನಡೆಸಿದ ಮಾತುಕತೆಯ ಸ್ಕ್ರೀನ್ಶಾಟ್ ಇದೆ. ಇದೆಲ್ಲದರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡುತ್ತಿದ್ದೇನೆ. ಆದರೆ ಅವರ ಮೇಲೆ ಇಷ್ಟೆಲ್ಲ ಆರೋಪಗಳಿದ್ದರೂ ಯಾವುದೇ ಕ್ರಮ ಆಗುತ್ತಿಲ್ಲ. ಬೆಂಬಲವಾಗಿ ಅವರ ಹಿಂದೆ ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಆಗಬೇಕು. ಸರ್ವೀಸ್ ಕಂಡಕ್ಟ್ ಬಗ್ಗೆ ತನಿಖೆ ಮಾಡಬೇಕು ಎಂದು ಡಿ.ರೂಪ ಕೋರಿಕೆ ಸಲ್ಲಿಸಿದ್ದಾರೆ.