ಕೇರಳದ 17 ವರ್ಷದ ಬಾಲಕಿಯೊಬ್ಬಳು ಯಕೃತ್ತಿನ (ಲಿವರ್) ಭಾಗವೊಂದನ್ನು ದಾನ ಮಾಡಿ ತಂದೆಯ ಪ್ರಾಣ ಉಳಿಸಲು ನೆರವಾದ ಪ್ರಕರಣವೊಂದು ನಡೆದಿದೆ. ಈ ಮೂಲಕ, 17 ವರ್ಷದ ದೇವನಂದ ಎಂಬ 12ನೇ ತರಗತಿಯ ಬಾಲಕಿ ಅಂಗಾಂಗ ದಾನ ಮಾಡಿದ ಭಾರತದ ಅತ್ಯಂತ ಕಿರಿಯ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.
ಕಾನೂನು ಪ್ರಕಾರ ಅಪ್ರಾಪ್ತರು ಅಂಗಾಂಗ ದಾನ ಮಾಡುವಂತಿಲ್ಲ. ಆದರೆ ಅದರಿಂದ ವಿನಾಯಿತಿ ನೀಡುವಂತೆ ಕೋರಿ ದೇವನಂದ ಕೇರಳ ಹೈಕೋರ್ಟ್ಗೆ ಮೊರೆ ಹೋಗಿದ್ದಳು. ಕೋರ್ಟ್ ಅನುಮತಿ ನೀಡಿದ ನಂತರ, ಯಕೃತ್ತಿನ ಗಂಭೀರ ವ್ಯಾಧಿಯಿಂದ ಬಳಲುತ್ತಿದ್ದ ತಂದೆ ಪೃತೀಶ್ರಿಗೆ ಮಗಳು ದೇವನಂದ ಯಕೃತ್ತಿನ ಭಾಗವನ್ನು ದಾನ ಮಾಡಿದಳು. ಈ ಮೂಲಕ, ತ್ರಿಶೂರಿನಲ್ಲಿ ಕೆಫೆ ನಡೆಸುತ್ತಿರುವ 48 ವರ್ಷದ ತನ್ನ ತಂದೆಗೆ ಜೀವದಾನ ಮಾಡಿದಳು. ಫೆಬ್ರವರಿ 9ರಂದು ಮಗಳ ಯಕೃತ್ತಿ ಭಾಗವನ್ನು ತಂದೆಗೆ ಕಸಿ ಮಾಡಲಾಗಿದೆ.
ವೆಚ್ಚ ಮಾಫಿ
ಅಳುವಾದ ರಾಜಗಿರಿ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮಗಳ ಪಿತೃ ಪ್ರೇಮ ಮೆಚ್ಚಿಕೊಂಡ ಆಸ್ಪತ್ರೆಯ ಆಡಳಿತ ಮಂಡಳಿ, ಶಸ್ತ್ರಚಿಕಿತ್ಸೆಗೆ ತಗಲಿದ ವೆಚ್ಚವನ್ನು ಪೂರ್ಣವಾಗಿ ಮನ್ನಾ ಮಾಡಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಜಿಮ್ ಸೇರಿದ್ದಳು
ತಂದೆಯ ಜೀವ ಕಾಪಾಡ ಬಹುದಾದ ತನ್ನ ಯಕೃತ್ತು ದಾನಕ್ಕೆ ಯೋಗ್ಯವಾದ ಸ್ಥಿತಿಯಲ್ಲಿರುವುದನ್ನು ಖಾತರಿಪಡಿಸಲು ಆಹಾರ ಪದ್ಧತಿಯಲ್ಲೇ ಬದಲಾವಣೆ ಮಾಡಿಕೊಂಡ ದೇವನಂದ, ನಿಯಮಿತ ವ್ಯಾಯಾಮ ನಡೆಸಲು ಸ್ಥಳೀಯ ಜಿಮ್ ಸೇರಿದ್ದಳು.