ಅಬುಧಾಬಿ: ಇಂದು ಅಬುಧಾಬಿ ಸ್ಟೇಡಿಯಂನಲ್ಲಿ ನಡೆದ ವಿಕೇಂಡ್ ಧಮಾಕದ ಮೊದಲನೇ ಮ್ಯಾಚಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಯ ಕ್ಷಣದಲ್ಲಿ ರೋಚಕ ಜಯವನ್ನು ಕಂಡಿದೆ.
ಇಂದು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಅವರ ಭರ್ಜರಿ ಬ್ಯಾಟಿಂಗ್ನಿಂದ ನಿಗದಿತ 20 ಓವರಿನಲ್ಲಿ 164 ರನ್ಗಳನ್ನು ಟಾರ್ಗೆಟ್ ಆಗಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕಿತು. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಮೂರು ಓವರಿನಲ್ಲಿ ರನ್ ಕಲೆಹಾಕಲು ಎಡವಿದ ಪಂಜಾಬ್ ಕೇವಲ ಎರಡು ರನ್ ಅಂತರದಲ್ಲಿ ಸೋತಿದೆ.
ರೈನ್, ಪ್ರಸೀದ್ ಕೃಷ್ಣ ಬೌಲಿಂಗ್ ಮೋಡಿ
ಉತ್ತಮ ಆರಂಭ ಪಡೆದ ಪಂಜಾಬ್ ತಂಡ 17ನೇ ಓವರ್ ಮುಕ್ತಾಯಕ್ಕೆ 143 ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಅವರು ಆ ಓವರಿನಲ್ಲಿ ಕೇವಲ ಎರಡು ರನ್ ಕೊಟ್ಟು ಒಂದು ವಿಕೆಟ್ ಕಿತ್ತರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರಿಗೆ ಪಂಜಾಬಿಗೆ 14 ರನ್ ಬೇಕಿತ್ತು. ಆಗ ಬೌಲಿಂಗ್ ದಾಳಿಗಿಳಿದ ನರೈನ್ 11 ರನ್ ನೀಡಿ ಒಂದು ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಜಯ ತಂದುಕೊಟ್ಟರು.
ಕೋಲ್ಕತ್ತಾ ನೀಡಿದ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಬಂದ ಪಂಜಾಬ್ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಮೊದಲಿಗೆ ತಾಳ್ಮೆಯಿಂದ ರನ್ ಕಲೆಹಾಕಿದರು. ಮೊದಲ ಆರು ಓವರಿನಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ ರಾಹುಲ್ ಮತ್ತು ಅಗರ್ವಾಲ್ ಅವರು, ಪವರ್ ಪ್ಲೇ ಅಂತ್ಯಕ್ಕೆ ಯಾವುದೇ ವಿಕೆಟ್ ಕಳೆದುಕೊಳ್ಳದೇ 47 ರನ್ ಪೇರಿಸಿದರು.
ವಿಕೆಟ್ ಕಳೆದುಕೊಳ್ಳದೇ ಬ್ಯಾಟ್ ಬೀಸಿದ ರಾಹುಲ್ ಅಗರ್ವಾಲ್ ಜೋಡಿ 12 ಓವರ್ ಮುಕ್ತಾಯಕ್ಕೆ 94 ರನ್ ಸೇರಿಸಿತು. ಈ ನಡುವೆ 43 ಬಾಲಿಗೆ ನಾಯಕ ರಾಹುಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಯಾಂಕ್ ಅಗರ್ವಾಲ್ ಅವರು 33 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ 73 ಬಾಲಿಗೆ ಈ ಜೋಡಿ ಶತಕ ಜೊತೆಯಾಟವಾಡಿತು.