ಹಾವೇರಿ: ಗಡಿನಾಡು ಕನ್ನಡಿಗರ ಬವಣೆಗಳನ್ನು ನೀಗುವ ಸಲುವಾಗಿ ಈಗಾಗಲೆ ನೀಡಿರುವ ₹25 ಕೋಟಿ ರೂ. ಜತೆಗೆ ಮತ್ತೆ ₹25 ಕೋಟಿ ರೂ. ನೀಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಇದೇ ವೇಳೆ, ಪ್ರಾಥಮಿಕ ಹಂತದಿಂದಲೇ ಮಾತೃಭಾಷೆಯನ್ನು ಕಡ್ಡಾಯ ಮಾಡುವ ಕುರಿತು ಸಂವಿಧಾನ ತಿದ್ದುಪಡಿಯ ಅಗತ್ಯವಿರುವ ಕುರಿತು ಒತ್ತಾಸೆ ವ್ಯಕ್ತಪಡಿಸಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮೂರು ದಿನದ ಕನ್ನಡದ ಹಬ್ಬ ಸಂಪೂರ್ಣ ಯಶಸ್ವಿಯಾಗಿದೆ. ಅದಕ್ಕಾಗಿ ಎಲ್ಲರಿಗೂ ಕೋಟಿ ಕೋಟಿ ನಮನಗಳು. ಕನ್ನಡದ ಬಳಗ, ದೊಡ್ಡ ಬಳಗ, ಒಬ್ಬ ಮುಖ್ಯಮಂತ್ರಿ, ಶಾಸಕನಿಂದ ಆಗುವುದಿಲ್ಲ. ಇಡೀ ಜನಸಮುದಾಯ ಕೈಜೋಡಿಸಿದಾಗ ಕನ್ನಡ ಬೆಳಗುತ್ತದೆ.
ಕನ್ನಡದ ಸಾಹಿತ್ಯ ಲೋಕ, ಅತಿ ಹೆಚ್ಚು ಜ್ಞಾನಪೀಠ ಪಡೆದ ಖ್ಯಾತಿ ಕನ್ನಡಕ್ಕಿದೆ. ಇಷ್ಟು ಉತ್ಕೃಷ್ಟವಾದ ಸಾಹಿತ್ಯ ಇದ್ದರೂ ಕನ್ನಡ, ಕನ್ನಡ ಜನಪದ, ಜನಸಾಮಾನ್ಯರೊಂದಿಗೆ ಭಾಷೆಗೆ ನಿಕಟ ಸಂಪರ್ಕ ಇದೆ. ಕೆಲವು ಭಾಷೆಗಳಲ್ಲಿ ಉತ್ಕೃಷ್ಟ ಭಾಷೆಗೂ ಜನಸಾಮಾನ್ಯರ ಭಾಷೆಗೂ ಸಂಬಂಧವೇ ಇಲ್ಲದಂತಹ ಪ್ರತ್ಯೇಕ ಲೋಕಗಳಿವೆ. ಕನ್ನಡದಲ್ಲಿ ಮಾತ್ರ ಎರಡೂ ಒಂದಾಗಿವೆ ಎಂದರು.
ಜನಸಾಮಾನ್ಯರ ಚಿಂತನೆ ಶ್ರೇಷ್ಠ ಸಾಹಿತ್ಯವಾಗುತ್ತದೆ, ಶ್ರೇಷ್ಠ ಸಾಹಿತ್ಯ ಜನಸಾಮಾನ್ಯರನ್ನು ಮುಟ್ಟುತ್ತಿರುವುದು ಕರ್ನಾಟಕದಲ್ಲಿ. ಇದು ಕನ್ನಡ ಭಾಷೆಯ ಶ್ರೇಷ್ಠತೆ ಇದು. ಕನ್ನಡ ಎಲ್ಲವನ್ನೂ ಅತ್ಯಂತ ಪಾರದರ್ಶಕವಾಗಿ ಹೇಳುವ, ಕೇಳುವ, ತಿಳಿದುಕೊಳ್ಳುವ ಭಾಷೆ. ನಮ್ಮ ವಿಚಾರಗಳಲ್ಲಿ ಭಿನ್ನತೆ ಇದ್ದರೂ ಮನಸ್ಸು ಒಂದಾಗಿದೆ. ಕನ್ನಡ ಭಾಷೆಗೆ ಉಜ್ವಲ ಭವಿಷ್ಯವಿದೆ. ಮುಂದಾಲೋಚನೆಯನ್ನು ನಡೆಸುವುದರಲ್ಲಿ ರಾಜ್ಯ ಮುನ್ನಡೆ ಕಾಯ್ದುಕೊಂಡಿದೆ.
ನಿಸರ್ಗವೂ ಕರ್ನಾಟಕಕ್ಕೆ ವರದಾನವಾಗಿದೆ. ಅದೆಲ್ಲವನ್ನೂ ಉಳಿಸಿಕೊಂಡರೆ ಕರ್ನಾಟಕ ಭೂತಾಯಿ ಹಸಿರು ಸೀರೆ ಉಡಬಹುದಾಗಿದೆ. ಅದಕ್ಕಾಗಿ ಅನೇಕ ಕಾನೂನು ತೊಡಕನ್ನು ಎದುರಿಸುತ್ತದೆ, ಅದೆಲ್ಲವನ್ನೂ ಬಗೆಹರಿಸಿಕೊಂಡು ಬರುತ್ತಿದ್ದೇವೆ. ಮಹದಾಯಿ ಯೋಜನೆಗೆ ಅನುಮತಿ ಸಿಕ್ಕಿದೆ, ಬರುವಂತಹ ದಿನದಲ್ಲಿ ಮಹದಾಯಿ ನೀರನ್ನು ಮಲಪ್ರಭೆಗೆ ಸೇರಿಸುವ ಕನ್ನಡಿಗರ ಕನಸು ನನಸಾಗುತ್ತಿದೆ. ಅದೇ ರೀತಿ ಕೃಷ್ಣೆ, 11 ವರ್ಷದ ಹಿಂದೆ ನ್ಯಾಯಮಂಡಳಿ ಆದೇಶವಾದರೂ ಸುಪ್ರೀಂಕೋರ್ಟ್ನಲ್ಲಿ ವಾದ ನಡೆದಿದೆ. ಆಲಮಟ್ಟಿ ಎತ್ತರಿಸಲು ಶೀಘ್ರವೇ ಅನುಮತಿ ಸಿಗಲಿದೆ ಎಂಬ ವಿಶವಾಸವಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಡಬಲ್ ಇಂಜಿನ್ ಸರ್ಕಾರ ಅನುಮತಿ ನೀಡಿದೆ. ಕರ್ನಾಟಕದ ಪ್ರಥಮ ರಾಷ್ಟ್ರೀಯ ನೀರಾವರಿ ಯೋಜನೆಯಾಗಿ ಇದಕ್ಕೆ ಸುಮಾರು ಹದಿಮೂರು ಸಾವಿರ ಕೋಟಿ ರೂ. ಲಭಿಸುತ್ತದೆ, ಸುಮಾರು 2 ಲಕ್ಷ ಎಕರೆ ನೀರಾವರಿಯಾಗುತ್ತದೆ. ಈ ಎಲ್ಲ ನಿರ್ಣಯಗಳನ್ನೂ ಶೀಘ್ರದಲ್ಲೇ ಕನ್ನಡಿಗರಿಗೆ ಉಡುಗೊರೆಯಾಗಿ ಲಭಿಸುತ್ತದೆ. ಸುಪ್ರೀಂಕೋರ್ಟ್ನಲ್ಲಿದ್ದರೂ, ಮೇಕೆ ದಾಟು ನಮ್ಮ ಪರವಾಗಲಿದೆ ಎಂಬ ವಿಶ್ವಾಸವಿದೆ. ನೆಲ, ಜಲ, ನಾಡು ನುಡಿ ವಿಚಾರದಲ್ಲಿ ನಮ್ಮ ಸರ್ಕಾರ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತದೆ.
ಎಲ್ಲ ಮಾತೃಭಾಷೆಗಳಿಗೂ ಸಂವಿಧಾನದ ರಕ್ಷಣೆ ಬೇಕಾಗಿದೆ. ಪ್ರಾಥಮಿಕ ಹಂತದಲ್ಲೇ ಮಾತೃಭಾಷೆ ಕಲಿಸಲು ರಾಜ್ಯಗಳು ಆದೇಶ ಮಾಡಿದರೂ ನ್ಯಾಯಾಲಯದಲ್ಲಿ ವಿಫಲವಾಗಿವೆ. ಸುಮಾರು ಮೂವತ್ತು ವರ್ಷದಿಂದ ಇದನ್ನು ನೋಡುತ್ತಿದ್ದೇವೆ. ಇದಕ್ಕೆ ಸಂವಿಧಾನದ ರಕ್ಷಣೆಯ ಅಗತ್ಯವಿದೆ. ಬರುವ ದಿನಗಳಲ್ಲಿ ಈ ನಿಟ್ಟಿನಲ್ಲಿ, ಕೇಂದ್ರ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಮುಟ್ಟಿಸಬೇಕಾಗಿದೆ.