ಚಿತ್ರದುರ್ಗ, ಜನವರಿ 07 : ಮೇದಾರ ಸಮುದಾಯದ ಗುರುಗಳ ಹೆಸರಿನಲ್ಲಿ ಅಭಿವೃದ್ದಿ ನಿಗಮ ಸ್ಥಾಪಿಸಿ, ಬಿದಿರು ವೃತ್ತಿಗೆ ಬೆಂಬಲ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ಅಖಿಲ ಭಾರತ, ಅಖಿಲ ಕರ್ನಾಟಕ ಮೇದಾರ ಬುಡಕಟ್ಟು ಜನಾಂಗದ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು.
ನಿಗಮದಲ್ಲಿ ಹೊಸ ತಂತ್ರಜ್ಞಾನಗಳನ್ನು ತಂದು, ತರಬೇತಿ ನೀಡಬೇಕು. ಪ್ರತಿ ಜಿಲ್ಲೆಯಲ್ಲಿ ಬಿದಿರಿನ ಹೊಸ ಉತ್ಪನ್ನಗಳನ್ನು ತಯಾರಿಸುವ ಕೇಂದ್ರಗಳನ್ನು ಸ್ಥಾಪಿಸಿ, ಆ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಜೋಡಿಸಬೇಕು. ಆನ್ಲೈನ್ ಮಾರುಕಟ್ಟೆಯ ಮೂಲಕ ರಾಜ್ಯದ ಬಿದಿರಿನ ಉತ್ಪನ್ನಗಳು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಬೇಕು. ಇದಕ್ಕೆ ಬೇಕಾಗಿರುವ ಬಂಡವಾಳವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದರು.
ಸಮುದಾಯ ಭವನ : ಸಮುದಾಯದ ಮಠದ ಅಭಿವೃದ್ಧಿಗೂ ಅನುದಾನ ಪೂರೈಸಲಾಗುವುದು. ಮೇದಾರ ಗುರುಗಳ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುವುದು. ಮೇದಾರ ಸಮುದಾಯ ಹೆಚ್ಚಿರುವ ಜಿಲ್ಲೆಯಲ್ಲಿ ಸಮುದಾಯ ಭವನ ನಿರ್ಮಾಣ, ಜಿಎಸ್ ಟಿ ಪಾವತಿಯಲ್ಲಿ ಸೂಕ್ತ ತೀರ್ಮಾನದ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.
ಬಿದಿರಿನ ಅಭಿವೃದ್ಧಿಗಾಗಿ ವಿಶೇಷವಾದ ಜಮೀನು ಮೀಸಲು : ಮೇದಾರ ಸಮುದಾಯದ ಬೇಡಿಕೆಗಳು ಬಿದಿರಿನ ಕೆಲಸದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಚೈನಾ ಮತ್ತು ಜಪಾನ್ ನಲ್ಲಿ ಬಿದಿರಿನ ಬಳಕೆಯ ಪ್ರಮಾಣದಲ್ಲಿ ಬದಲಾವಣೆಯಾಗಿದ್ದು, ಪೀಠೋಪಕರಣ, ದಿನೋಪಯೋಗಿ ವಸ್ತುಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಬಿದಿರಿನ ಕೆಲಸಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಿದಿರು ಸಿಗುವಂತಾಗಬೇಕು. ಕರ್ನಾಟಕದಲ್ಲಿ ಈ ಮುಂಚೆ 36 % ಕಾಡು ಇದ್ದಾಗ ಸಾಕಷ್ಟು ಬಿದಿರು ಸಂಪತ್ತು ಇತ್ತು. ಬಿದಿರಿನ ಮತ್ತೆ ನಾವು ಬೆಳೆದು ಈ ಉದ್ದೇಶಕ್ಕೆ ನೀಡುವ ವ್ಯವಸ್ಥೆ ಆಗಬೇಕಿದೆ. ನಮ್ಮ ಸರ್ಕಾರ ಬಿದಿರಿನ ಅಭಿವೃದ್ಧಿಗಾಗಿ ವಿಶೇಷವಾದ ಜಮೀನು ಮೀಸಲಿಟ್ಟು, ಅರಣ್ಯ ಇಲಾಖೆಯಿಂದ ಬಿದಿರನ್ನು ಬೆಳೆಸಿ ಸರಬರಾಜು ಮಾಡುವ ಕೆಲಸವನ್ನು ಮಾಡುತ್ತದೆ. ಯೋಗ್ಯ ಮತ್ತು ಸುಲಭ ದರವನ್ನು ನಿಗದಿಪಡಿಸಿ ಬಿದಿರಿನ ಖರೀದಿಗೆ ವ್ಯವಸ್ಥೆಯನ್ನು ಕಲ್ಪಿಸಿ, ಪ್ರತಿ ಬಿದಿರು ಕಸುಬುದಾರರಿಗೆ ಕೋಟಾವನ್ನು ನಿಗದಿಪಡಿಸಲಾಗುವುದು ಎಂದರು.
ಬೀದರ್ ನಲ್ಲಿರುವ ಕೇತೇಶ್ವರರ ಸಮಾಧಿಯ ಸುರಕ್ಷತೆಗೆ ಕ್ರಮ:
ಬೀದರ್ ನಲ್ಲಿರುವ ಕೇತೇಶ್ವರರ ಸಮಾಧಿಯ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ನಿಸರ್ಗದತ್ತವಾದ ಬಿದಿರಿನ ಸುಸ್ಥಿರ ಹಾಗೂ ನಿರಂತರ ಬೆಳವಣಿಗೆಯಾಗಿಸಲು ಹಲವು ಕ್ರಮಗಳ ಅವಶ್ಯಕತೆ ಇದೆ. ದುಡಿಮೆ ನಿಮ್ಮದು, ದುಡಿಮೆಗೆ ಬೆಲೆ ತರುವ ಕೆಲಸ ಸರ್ಕಾರದ್ದು. ಭೋವಿ ಜನಾಂಗದವರ ಸಮಸ್ಯೆಯನ್ನು ಬಗೆಹರಿಸಿದ್ದೇವೆ. ಕಲ್ಲು ಒಡೆಯುವ ಭೋವಿಗೆ ಸಮಸ್ಯೆ ಬಗೆಹರಿಸಲು ಕಾನೂನುಗಳನ್ನು ಸರಳೀಕರಿಸುವ ವಿಚಾರವನ್ನು ಮುಂದಿನ ಅಧಿವೇಶನದಲ್ಲಿ ತರಲಾಗುವುದು. ಅಮೃತ ಯೋಜನೆಯಡಿ 354 ಕೋಟಿ ರೂ.ಗಳ ಅನುದಾನವನ್ನು ಕುರಿಗಾಹಿಗಳ ಸಂಘಗಳಿಗೆ ನೀಡಲಾಗುತ್ತಿದೆ. ಲಿಡ್ಕರ್ ನ ಉತ್ಪನ್ನಗಳನ್ನು ಹೆಚ್ಚಿಸಲಾಗುತ್ತಿದೆ. ಲಂಬಾಣಿ ಬಂಜಾರರ ತಾಂಡಗಳನ್ನು ಗ್ರಾಮಗಳನ್ನಾಗಿ ಮಾಡಿ ಮನೆಗಳಿಗೆ ಹಕ್ಕುಪತ್ರಗಳನ್ನು ನೀಡಲು ಕ್ರಮ ವಹಿಸಲಾಗುತ್ತಿದೆ. ಕರ್ನಾಟಕದಲ್ಲಿ ಕಾಯಕ ಕ್ರಾಂತಿ ಆಗಬೇಕೆಂಬುದು ನನ್ನ ಆಸೆಯಾಗಿದೆ ಎಂದರು