ಬೆಳಗಾವಿ: ಒಂದೆಡೆ ಪ್ರೇಕ್ಷಣೀಯ ಸ್ಥಳಗಳು, ದೇವಾಲಯಗಳಿಗೆ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದರೆ, ಮತ್ತೊಂದೆಡೆ ಇಲ್ಲಿನ ಸುವರ್ಣ ವಿಧಾನಸೌಧಕ್ಕೆ ಭೇಟಿ ನೀಡುವ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದೆ.
ಇಲ್ಲಿ ಡಿ.19ರಿಂದ ಆರಂಭಗೊಂಡ ವಿಧಾನಮಂಡಲ ಚಳಿಗಾಲದ ಅಧಿವೇಶನ ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಯಿಂದ ಜನರು ಆಗಮಿಸುತ್ತಿದ್ದಾರೆ. ಈ ಮಧ್ಯೆ, ಸಾವಿರಾರು ವಿದ್ಯಾರ್ಥಿಗಳೂ ಹೆಜ್ಜೆ ಹಾಕುತ್ತಿರುವುದರಿಂದ ಭವ್ಯ ಸೌಧವೀಗ ‘ಶೈಕ್ಷಣಿಕ ಪ್ರವಾಸ’ದ ಕೇಂದ್ರವಾಗಿ ಬದಲಾಗಿದೆ. ಸೌಧದ ಅಂಗಳದಲ್ಲಿ ಮಕ್ಕಳ ಕಲರವ ಕಂಡುಬರುತ್ತಿದೆ.
10 ಸಾವಿರ ಜನರ ಭೇಟಿ: ‘ಸೌಧದ ಎಡಬದಿಗೆ ತೆರೆದ ಕೌಂಟರ್ಗಳಲ್ಲಿ ಅಧಿವೇಶನಕ್ಕೆ ಬರುವ ಸಾರ್ವಜನಿಕರಿಗೆ ಜಿಲ್ಲಾಡಳಿತದಿಂದ ಇ-ಪಾಸ್ ಕೊಡುತ್ತಿದ್ದೇವೆ. ಡಿ.26ರವರೆಗೆ 10,503 ಜನರಿಗೆ ಪಾಸ್ ವಿತರಿಸಿದ್ದೇವೆ. ಬೆಳಗಾವಿ ಮಾತ್ರವಲ್ಲದೆ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಗಳ 16 ಶಾಲಾ, ಕಾಲೇಜುಗಳ 2,270 ವಿದ್ಯಾರ್ಥಿಗಳೂ ಪಾಸ್ ಪಡೆದಿದ್ದಾರೆ. ಸೌಧದೊಳಗೆ ಹೋದ ನಂತರ, ವಿಧಾನಸಭೆ ಮತ್ತು ವಿಧಾನ ಪರಿಷತ್ ಸಚಿವಾಲಯದಿಂದ ಪ್ರತ್ಯೇಕ ಪಾಸ್ ಪಡೆದು ಕಲಾಪ ವೀಕ್ಷಿಸುತ್ತಿದ್ದಾರೆ’ ಎಂದು ಇ-ಪಾಸ್ ವ್ಯವಸ್ಥೆ ಉಸ್ತುವಾರಿಯಾಗಿರುವ ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಬಾಗೇವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಏನೇನು ವೀಕ್ಷಣೆ?: ಶಿಕ್ಷಕರ ಬಳಗದೊಂದಿಗೆ ಸೌಧ ಪ್ರವೇಶಿಸುತ್ತಿರುವ ವಿದ್ಯಾರ್ಥಿಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವಿಧಾನಸಭೆ, ವಿಧಾನ ಪರಿಷತ್ ಕಲಾಪ ವೀಕ್ಷಿಸುತ್ತಿದ್ದಾರೆ. ಆಡಳಿತ, ಪ್ರತಿಪಕ್ಷದವರ ವಾದ-ವಿವಾದ, ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದಾರೆ. ಜತೆಗೆ ಸೆಂಟ್ರಲ್ ಹಾಲ್, ಕಾನ್ಫರೆನ್ಸ್ ಹಾಲ್ ಮತ್ತಿತರ ಕಡೆ ಭೇಟಿ ಕೊಡುತ್ತಿದ್ದಾರೆ. ಸೌಧದ ಕಾರ್ಯನಿರ್ವಹಣೆ, ಭದ್ರತಾ ವ್ಯವಸ್ಥೆ ಕುರಿತು ಸಿಬ್ಬಂದಿಯಿಂದ ಮಾಹಿತಿ ಪಡೆಯುತ್ತಿದ್ದಾರೆ. ಸೌಧದ ಮುಂದೆ ಒಟ್ಟಾಗಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.
‘ವಿಧಾನಮಂಡಲ ಚಳಿಗಾಲದ ಅಧಿವೇಶನ ಹೇಗೆ ನಡೆಯುತ್ತದೆ ಎನ್ನುವ ಕುತೂಹಲವಿತ್ತು. ಇಲ್ಲಿಗೇ ಬಂದು ವೀಕ್ಷಿಸಿದ್ದರಿಂದ ತುಂಬಾ ಸಂತಸವಾಗಿದೆ’ ಎನ್ನುತ್ತಾಳೆ ರಾಮದುರ್ಗ ತಾಲ್ಲೂಕಿನ ಹುಲಕುಂದದ ರಾಮೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೃಷ್ಟಿ ಪಾಟೀಲ.
*
‘ಅಧಿವೇಶನ ನಂತರವೂ ಬರಬಹುದು’
ವಿದ್ಯಾರ್ಥಿಗಳು ಅಧಿವೇಶನದಲ್ಲಿ ಮಾತ್ರವಲ್ಲ; ನಂತರದ ದಿನಗಳಲ್ಲೂ ಸೌಧಕ್ಕೆ ಭೇಟಿ ನೀಡಲು ಮುಕ್ತ ಅವಕಾಶವಿದೆ.
‘ಪ್ರತಿವರ್ಷ ಶೈಕ್ಷಣಿಕ ಪ್ರವಾಸಕ್ಕೆ ವಿದ್ಯಾರ್ಥಿಗಳು ಬರುತ್ತಾರೆ. ಸೌಧದ ವಿಶೇಷತೆ ಕುರಿತು ನಾವೇ ಅವರಿಗೆ ವಿವರಿಸುತ್ತೇವೆ. ಪ್ರವಾಸಕ್ಕೂ ಬರುವ ಮುನ್ನವೇ ಅರ್ಜಿ ಕೊಟ್ಟರೆ, ಶಾಲೆಯವರು ಅನುಮತಿ ಕೊಡುತ್ತೇವೆ’