ಕೊಪ್ಪಳ : ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮಸಾಗರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಈಗ ಸಮಾಜವಿಜ್ಞಾನದ ಪಠ್ಯ ವಿಷಯವನ್ನೇ ನಾಟಕ, ಹಾಡು, ಕಥೆ, ಕವನದ ರೂಪಕ್ಕೆ ಬದಲಾಯಿಸಿಕೊಂಡು ಕಲಿಕೆ ಸರಳೀಕರಣಗೊಳಿಸಿಕೊಂಡು ಅಭ್ಯಾಸ ಮಾಡುತ್ತಿದ್ದಾರೆ.
ಸಮಾಜವಿಜ್ಞಾನ ಶಿಕ್ಷಕ ಕಿಶನರಾವ್ ಕುಲಕರ್ಣಿ ಸಮಾಜ ವಿಜ್ಞಾನದ ಎಲ್ಲ ಸಿಲೆಬಸ್ ಅನ್ನು ನಾಟಕ ಹಾಗೂ ಕಥೆಗಳಿಗೆ ಬದಲಾವಣೆ ಮಾಡಿದ ಕಾರಣಕ್ಕಾಗಿ ವಿದ್ಯಾರ್ಥಿಗಳು ಅಭಿನಯಿಸುವದರೊಂದಿಗೆ ಕಲಿಕೆ ದೃಢೀಕರಿಸಿಕೊಳ್ಳುತ್ತಿದ್ದಾರೆ.
ವಿದ್ಯಾರ್ಥಿಗಳು ಸಮಾಜ ವಿಜ್ಞಾನ ವಿಷಯದಲ್ಲಿ ಬರುವ ಎಲ್ಲಾ ಪಾಠಗಳನ್ನು ತಾವೇ ಸಂಭಾಷಣೆ ರೂಪಕ್ಕೆ ಬದಲಾಯಿಸಿಕೊಳ್ಳುತ್ತಾರೆ.
ಈ ಶಾಲೆಯಲ್ಲಿ ಬೋಧನೆ ಕೇವಲ ಶಾಲೆಯ ಕೊಠಡಿಯಲ್ಲಿ ನಡೆಯದೆ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುತ್ತದೆ.
ಭೌಗೋಳಿಕ ವಿಷಯಕ್ಕೆ ಸಂಬಂಧಪಟ್ಟಂತೆ ಶಿಕ್ಷಕರು ಬೆಟ್ಟ, ತೋಟ, ಗದ್ದೆಗಳಲ್ಲಿ ವಿದ್ಯಾರ್ಥಿಗಳಿಗೆ ಹೋಗಿ ಶಿಕ್ಷಕರು ಪಾಠ ಮಾಡುತ್ತಾರೆ.
ಶಿಕ್ಷಕ ಕಿಶನರಾವ್ ಕುಲಕರ್ಣಿ ಅವರು ತಾವು ಮಾಡುವ ಪಾಠವನ್ನು ವಿಡಿಯೋ ರೆಕಾರ್ಡ ಮಾಡಿ ಶಾಲಾ ಹೆಸರು ಹೊಂದಿದ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಿಯಾದ ದಿನ ಮನೆಯಲ್ಲಿಯೇ ಕುಳಿತು ವೀಕ್ಷಿಸಿ ಅಪ್ಡೇಟ್ ಆಗುತ್ತಾರೆ.