ದೀಪಾವಳಿ ಹಬ್ಬದ ಪ್ರಯುಕ್ತ ಹಚ್ಚಿದ ಪಟಾಕಿ ಕಿಡಿ ಸಿಡಿದು ಕುಶನ್ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ತಡರಾತ್ರಿ ನಡೆದಿದೆ.
ಹೌದು ಕಿತ್ತೂರು ಪಟ್ಟಣದ ಶಬ್ಬೀರ ಬೀಡಿ ಎಂಬುವವರಿಗೆ ಸೇರಿದ ಕುಶನ್ ಅಂಗಡಿಗೆ ನಿನ್ನೆ ತಡರಾತ್ರಿ ಬೆಂಕಿ ತಗುಲಿದೆ. ಪಟಾಕಿ ಕಿಡಿ ಸಿಡಿಯುತ್ತಿದ್ದಂತೆ ಧಗಧಗನೇ ಕುಶನ್ ಅಂಗಡಿ ಹೊತ್ತಿ ಉರಿದಿದೆ. ಅಂದಾಜು 3 ಲಕ್ಷ ಮೌಲ್ಯದ ಸಿದ್ಧಗೊಂಡಿದ್ದ ಕುಶನ್, ಪೀಠೋಪಕರಣ ಬೆಂಕಿಗಾಹುತಿಯಾಗಿವೆ. ಶಬ್ಬೀರ ಬೀಡಿ ಅವರ ಪಕ್ಕದ ಅಂಗಡಿಯ ಮಾಲೀಕರಿಂದ ದೀಪಾವಳಿ ಪೂಜೆ ಮಾಡಲಾಗಿತ್ತು. ಬಳಿಕ ಪಟಾಕಿ ಸಿಡಿಸಲು ಮುಂದಾದಾಗ ಅದರ ಕಿಡಿ ಪಕ್ಕದ ಕುಶನ್ ಅಂಗಡಿಗೆ ತಗುಲಿ ಈ ಅವಘಡ ಸಂಭವಿಸಿದೆ. ಇನ್ನು ಬೆಂಕಿ ನಂದಿಸಲು ಹೋದ ಶಬ್ಬಿರ್ ಕೈ, ಕಾಲು ಇತರ ದೇಹದ ಭಾಗಗಳಿಗೆ ಗಾಯವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.
ಕಿತ್ತೂರು ಪಟ್ಟಣದಲ್ಲಿ ಕಿತ್ತೂರು ಉತ್ಸವ ಜೊತೆಗೆ ದೀಪಾವಳಿ ಹಬ್ಬದ ಸಂಭ್ರಮ ಸಡಗರ ಮನೆ ಮಾಡಿತ್ತು. ಸಂಭ್ರಮದ ಮಧ್ಯೆ ಕುಶನ್ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದ್ದು, ಮಾಲೀಕ ಶಬ್ಬೀರ ಬೀಡಿ ಕುಟುಂಬ ಕೆಳ ಮಹಡಿಯಲ್ಲಿ ವಾಸವಿದ್ದು, ಮೇಲಿನ ಮಹಡಿಯಲ್ಲಿ ಕುಶನ್ ಮಳಿಗೆ ಇದ್ದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.