ರಾಯಚೂರು(ಸೆ.09): ಬಾಲಕನೊಬ್ಬ ಶಾಲಾ ಸಮವಸ್ತ್ರದಲ್ಲಿ (School Uniform) ಮಲವಿಸರ್ಜನೆ ಮಾಡಿರುವ ವಿಚಾರವಾಗಿ ಕೋಪಗೊಂಡ ಶಿಕ್ಷಕನೊಬ್ಬ ಮಗುವಿನ ಮೇಲೆ ಬಿಸಿನೀರು ಸುರಿದಿದ್ದಾನೆ. ಹೌದು ರಾಯಚೂರು (Raichuru) ಜಿಲ್ಲೆ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಗ್ರಾಮದ ಘನಮಠೇಶ್ವರ ಗ್ರಾಮೀಣ ಸಂಸ್ಥೆಯ ಪ್ರಾಥಮಿಕ ಶಾಲೆಯ ಶಿಕ್ಷಕ ಹುಲಿಗೆಪ್ಪ ಎಂಬಾತನೇ ಈ ರಾಕ್ಷಸ ಕೃತ್ಯ ಮೆರೆದ ವ್ಯಕ್ತಿ. ಸದ್ಯ ಬಿಸಿ ನೀರಿನ ದಾಳಿಗೊಳಗಾದ 2ನೇ ತರಗತಿಯ ವಿದ್ಯಾರ್ಥಿ ಎಂಟು ವರ್ಷದ ಅಖಿತ್ ಸ್ಥಿತಿ ಗಂಭೀರವಾಗಿದೆ. ಲಿಂಗಸೂಗೂರು ತಾ. ಮಿಟ್ಟಿಕೆಲ್ಲೂರು ಗ್ರಾಮದ ಮಗು ಕೋಚಿಂಗ್ ಕ್ಲಾಸ್ ಗೆ ಹೋದಾಗ ಈ ಕೃತ್ಯ ನಡೆದಿದೆ.
ಇನ್ನು ಶಿಕ್ಷಕನ ಅಟ್ಟಹಾಸಕ್ಕೆ ಬಿಸಿನೀರಿನ ದಾಳಿಗೊಳಗಾದ ಮಗುವಿನ ದೇಹದ ಶೇ.40ರಷ್ಟು ಭಾಗಕ್ಕೆ ಗಂಭೀರ ಗಾಯಗಳಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ. ಮಗುವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆ.2 ರಂದು ಈ ಘಟನೆ ನಡೆದರೂ ಮಸ್ಕಿ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಅತ್ತ ಮಗುವಿಗೆ ಅನ್ಯಾಯ ನಡೆದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳೂ ಆಸ್ಪತ್ರೆಗೆ ಬಂದು ಭೇಟಿ ಮಾಡಿಲ್ಲ.ಮಗುವಿಗೆ ಬಿಸಿ ನೀರು ಎರಚಿ ವಿಕೃತಿ ಮೆರೆದ ಘನಮಠೇಶ್ವರ ಶಾಲಾ ಶಿಕ್ಷಕನ ಹುಲಿಗೆಪ್ಪ ಕ್ರೈಮ್ ಹಿನ್ನೆಲೆಯೂ ಈಗ ಬಯಲಾಗಿದೆ. 2015 ರಲ್ಲಿ ಮಾಜಿ ಶಾಸಕ ಕ ಮಾನಪ್ಪ ಡಿ ವಜ್ಜಲ್ ಕೊಲೆಗೆ ಸ್ಕೆಚ್ ಈ ಶಿಕ್ಷಕ ಕೈ ಹಾಕಿದ್ದ. ಎಲ್ಲಾ ಸಿದ್ಧತೆ ನಡೆಸಿದ್ದ ಈ ಶಿಕ್ಷಕ ಲಿಂಗಸಗೂರು ವಿಧಾನಸಭಾ ಕ್ಷೇತ್ರದ ಶಾಸಕ ಮಾನಪ್ಪ ಡಿ ವಜ್ಜಲ್ ಮನೆ ಮುಂಭಾಗ ಖಾವಿಧಾರಿ ವೇಷ ಧರಿಸಿ ಬ್ಯಾಗ್ನಲ್ಲಿ ಮಾರಕಾಸ್ತ್ರ ಇಟ್ಟುಕೊಂಡು ಓಡಾಟ ನಡೆಸಿದ್ದ. ಆದರೆ ಅನುಮಾನಾಸ್ಪದ ರೀತಿಯ ಓಡಾಟ ಕಂಡು ಸೆಕ್ಯುರಿಟಿ ಗಾರ್ಡ್ ಠಾಣೆಗೆ ಮಾಹಿತಿ ನೀಡಿದ್ದ .