ಬೆಳಗಾವಿ: ಒಂದು ದೇಶದ ಪ್ರಗತಿ ಅಲ್ಲಿಯ ಶಿಕ್ಷಣದ ಗುಣಮಟ್ಟದ ಮೇಲೆ ನಿಂತಿದೆ. ಗುಣಮಟ್ಟದ ಶಿಕ್ಷಣ ಸಾಕಾರಗೊಳ್ಳಲು ಅಲ್ಲಿಯ ಶಿಕ್ಷಕರ ವೃತ್ತಿಗೌರವಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವ ಮುಖೇನ ಅವರಿಗೆ ವೃತ್ತಿ ಸ್ವಾತಂತ್ರ್ಯ ನೀಡಿದರೆ ಭಾರತದ ಉಜ್ವಲ ಭವಿಷ್ಯ ಬರೆಯಬಲ್ಲ ಮಕ್ಕಳನ್ನು ತಯಾರು ಮಾಡಬಲ್ಲ ಸಾಮರ್ಥ್ಯ ಶಿಕ್ಷಕರಿಗಿದೆ ಎಂದು ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.
ನಗರದ ಹೊರವಲಯದ ಕಣಬರಗಿಯ ಸಮತಾ ಶಾಲೆಯಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ನಮ್ಮ ದೇಶದ ಶಿಕ್ಷಣ ಕ್ಷೇತದಲ್ಲಿ ಪರಿಣಾಮಕಾರಿ ಬದಲಾವಣೆಯ ಮೂಲಕ ಸಾಕ್ಷರತೆಯ ಪ್ರಮಾಣ ಶೇ 74 ಕ್ಕೆ ತಲುಪಿದೆ ಎಂದರು.
ಶಿಕ್ಷಕಿ ಶಶಿಕಲಾ ಹೊಸಮಠ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ, ಸುನಂದಾ ಪಟ್ಟಣಶೆಟ್ಟಿ, ಶ್ರೀದೇವಿ ಕುಂಬಾರ, ಮಲಿಕಜಾನ ಗದಗಿನ, ಉಮರಫಾರೂಕ ಹೆಬ್ಬಳ್ಳಿ, ರೇಣುಕಾ ಶಿರೂರ ಉಪಸ್ಥಿತರಿದ್ದರು. ದೇವಿಕಾ ಬುಡ್ರಾಗೋಳ ಸ್ವಾಗತಿಸಿದರು. ಭಾಗ್ಯಶ್ರೀ ಹಾಗೆದಾಳ ಕಾರ್ಯಕ್ರಮ ನಿರ್ವಹಿಸಿದರು. ಸೌರಭ ತಳವಾರ ವಂದಿಸಿದರು.