ಬೆಳಗಾವಿ: ಮತ್ತೊಂದು ಮಳೆಗಾಲ ಬಂದರೂ ಹಳ್ಳಿಗಳ ಸಂಪರ್ಕ ರಸ್ತೆಗಳು ಮಾತ್ರ ಇನ್ನೂ ದುರಸ್ತಿ ಕಂಡಿಲ್ಲ. ಕಳೆದ ಬಾರಿಯ ಅತಿವೃಷ್ಟಿ ಹಾಗೂ ಪ್ರವಾಹ ಪ್ರಭಾವದಿಂದ ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಎಲ್ಲೆಂದರಲ್ಲಿ ತಗ್ಗು ಬಿದ್ದಿದ್ದವು.
ಅವುಗಳಲ್ಲಿ ಕೆಲವನ್ನು ತೇಪೆ ಹಚ್ಚಿ ದುರಸ್ತಿ ಮಾಡಲಾಗಿದೆ. ಮತ್ತೆ ಕೆಲವು ಇನ್ನೂ ಹಾಗೇ ಇವೆ. ಹೀಗಾಗಿ, ಹಳ್ಳಿ ಮತ್ತು ನಗರಗಳ ಮಧ್ಯೆ ಸಂಚಾರ ಕೊಂಡಿಯಾದ ರಸ್ತೆಗಳೇ ಈಗ ಸಂಚಕಾರ ತರುವಂತಾಗಿವೆ.
ಅತಿಯಾಗಿ ಮಳೆ ಬಿದ್ದ ಬೆಳಗಾವಿ ತಾಲ್ಲೂಕು, ಖಾನಾಪುರ, ಗೋಕಾಕ, ಯರಗಟ್ಟಿ, ಅಥಣಿ, ರಾಯಬಾಗ, ರಾಮದುರ್ಗ ತಾಲ್ಲೂಕುಗಳಲ್ಲಿ ನೂರಾರು ಕಿಲೋಮೀಟರ್ ರಸ್ತೆ ಹಾಳಾಗಿದೆ. ಹಳ್ಳಿಗಳಿಂದ ಪಟ್ಟಣಕ್ಕೆ ಪ್ರತಿದಿನ ಓಡಾಡುವ ಜನ, ಶಾಲೆ- ಕಾಲೇಜಿಗೆಬರುವ ವಿದ್ಯಾರ್ಥಿಗಳು, ಜೀವನೋಪಾಕ್ಕೆ ಅಲೆಯುವ ವ್ಯಾಪಾರಿಗಳು, ನೌಕರರು ಈ ರಸ್ತೆಗಳಲ್ಲೇ ಸಂಚರಿಸು
ತ್ತಾರೆ. ಹದಗೆಟ್ಟ ರಸ್ತೆಯಲ್ಲಿ ವಾಹನಗಳು ಹಾಳಾಗುತ್ತವೆ ಎನ್ನುವುದಕ್ಕಿಂತ ಅಪಾಯಕ್ಕೆ ಆಹ್ವಾನ ನೀಡುತ್ತಿವೆ ಎನ್ನುವುದೇ ದೈನಂದಿನ ಚಿಂತೆಯಾಗಿದೆ.
ಎಲ್ಲಿ ಎಷ್ಟು ರಸ್ತೆ ಹಾಳು?: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳಲ್ಲಿ ಫೆಬ್ರುವರಿವರೆಗೆ 264 ಕಿ.ಮೀ.
ಪ್ರಮುಖ ರಸ್ತೆಗಳು, 149 ಕಿ.ಮೀ. ರಾಜ್ಯ ಹೆದ್ದಾರಿ ಕಳೆದ ಬಾರಿಯ ಮಳೆ ಮತ್ತು ಪ್ರವಾಹದಿಂದ ಹಾಳಾಗಿವೆ. ಈಗಾಗಲೇ ಹಲವು ಕಡೆ ಟೆಂಡರ್ ಕರೆಯಲಾಗಿದೆ. ಇನ್ನೂ ಶೇ 40ರಷ್ಟು ಕಾಮಗಾರಿಗಳು ಅನುಮೋದನೆಗಾಗಿ ಕಾಯುತ್ತಿವೆ ಎಂದು ಇಲಾಖೆಯ ಅಂಕಿ ಅಂಶಗಳು ಹೇಳುತ್ತವೆ.
ಜಲ್ಲಿಕಲ್ಲು ಟಿಪ್ಪರ್ಗಳದ್ದೇ ದರ್ಬಾರ್
ಎಂ.ಕೆ.ಹುಬ್ಬಳ್ಳಿ: ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಗ್ರಾಮೀಣ ರಸ್ತೆಗಳಲ್ಲಿ ಭಾರಿ ವಾಹನ
ಗಳ ಓಡಾಟ ಹೆಚ್ಚಾಗಿದೆ. ಮೇಲಾಗಿ, ಮಿತಿಗಿಂತ ಹೆಚ್ಚು ಭಾರ ಹೊತ್ತು ಸಾಗುವ ಈ ವಾಹನಗಳು ರಸ್ತೆಗೆ ಮತ್ತಷ್ಟು ಕಂಟಕ
ವಾಗಿವೆ. ಇಲಾಖೆಯ ಅಧಿಕಾರಿಗಳು ಇದು ಕಂಡೂ ಕಾಣದಂತೆ ಇದ್ದಾರೆ.
ಬೆಳಗಾವಿ ತಾಲ್ಲೂಕಿನ ಹಿರೇಬಾಗೇ ವಾಡಿ ಹಾಗೂ ಸುತ್ತಲಿನ ಗುಡ್ಡದ ಪ್ರದೇಶಗಳಲ್ಲಿರುವ ಜಲ್ಲಿಕಲ್ಲು ಉತ್ಪಾದನಾ ಕ್ವಾರಿಗಳಿಂದ ಅಧಿಕ ಭಾರದ ಜಲ್ಲಿಕಲ್ಲು (ಕಡಿ) ಹೊತ್ತು ಬರುವ ಟಿಪ್ಪರ್ಗಳ ಸಂಚಾರದ ಕಾರಣ ಈ ರಸ್ತೆಗಳು ಹಾಳಾಗಿವೆ.