ಹಾಸನ: ಜಿಲ್ಲೆಯಲ್ಲಿ ಕೊರೊನಾ ದಿನದಿಂದ ದಿನಕ್ಕೆ ತನ್ನ ಪಥವನ್ನು ವಿಸ್ತರಿಸಿಕೊಳ್ತಿದೆ. ಇದಕ್ಕೆ ಹಾಸನದ ಜನ ಮದ್ದು ಅರೆದಿದ್ದಾರೆ. ಸರ್ಕಾರದ ಆದೇಶ ಇಲ್ಲದಿದ್ದರೂ ಹಾಸನ ಜಿಲ್ಲೆ ಭಾಗಶಃ ಲಾಕ್ಡೌನ್ ಆಗುತ್ತಿದೆ.
ಹೌದು. ಜಿಲ್ಲೆಯಲ್ಲಿ ಕೊರೊನಾ ನಾಗಾಲೋಟದಿಂದ ಓಡುತ್ತಿದ್ದು ಕೊರೊನಾ ವಾರಿಯರ್ಸ್ ಸೇರಿದಂತೆ ಜಿಲ್ಲೆಯಲ್ಲಿ ಇದುವರೆಗೂ 541 ಕೊರೊನಾ ಪ್ರಕರಣ ಪತ್ತೆಯಾಗಿದೆ. ಅದರಲ್ಲಿ 255 ಜನ ಗುಣಮುಖರಾಗಿದ್ರೆ 278 ಕೇಸ್ಗಳು ಆಕ್ಟೀವ್ ಆಗಿದ್ದು 8 ಜನ ಮೃತಪಟ್ಟಿದ್ದಾರೆ.
ಹಾಸನ ಜಿಲ್ಲೆಯಲ್ಲೇ ಅದರಲ್ಲೂ ಚನ್ನರಾಯಪಟ್ಟಣದಲ್ಲಿ ಅತೀ ಹೆಚ್ಚು ಅಂದರೆ 227 ಕೇಸ್ ದಾಖಲಾಗಿದ್ದು ಸಮುದಾಯಕ್ಕೆ ಹರಡುವ ಭೀತಿ ಶುರುವಾಗಿದೆ. ಹೀಗಾಗಿ ಚನ್ನರಾಯಪಟ್ಟಣ ತಾಲೂಕನ್ನು ಇಂದಿನಿಂದ 14 ದಿನ ಸ್ವಯಂ ಲಾಕ್ಡೌನ್ ಮಾಡಲು ನಿರ್ಧರಿಸಲಾಗಿದೆ. ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಮಾತ್ರ ಅಗತ್ಯ ವಸ್ತುಕೊಳ್ಳಲು 12 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದೆ.
ಚನ್ನರಾಯಪಟ್ಟಣ ಅಷ್ಟೇ ಅಲ್ಲದೆ ಹಾಸನ, ಹೊಳೆನರಸೀಪುರ, ಅರಸೀಕೆರೆಯಲ್ಲಿ ಕೂಡ ನಯಾ ಲಾಕ್ಡೌನ್ಗೆ ಸ್ವಯಂ ಪ್ರೇರಿತವಾಗಿ ನಿರ್ಧರಿಸಿದ್ದಾರೆ. ಅರಸೀಕೆರೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಪ್ರತಿ ದಿನ ಅಂಗಡಿ ತೆರೆಯಲು ಅವಕಾಶ ನಿರ್ಧರಿಸಿದ್ದಾರೆ. ಹೊಳೆನರಸೀಪುರದಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ನಿರ್ಧಾರ ಮಾಡಿದ್ರೆ, ಹಾಸನದಲ್ಲಿ ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಮಾತ್ರ ಅಂಗಡಿ ತೆರೆಯಲು ನಿರ್ಧರಿಸಿದ್ದು ಶನಿವಾರ, ಭಾನುವಾರ ಸಂಪೂರ್ಣ ಲಾಕ್ಡೌನ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಒಟ್ಟಾರೆ ಕೊರೊನಾ ವಿರುದ್ಧ ಹೋರಾಟದಲ್ಲಿ ಕೇವಲ ಸರ್ಕಾರ ಎಲ್ಲಾ ನಿರ್ಧಾರ ತೆಗೆದುಕೊಳ್ಳಲು ಆಗಲ್ಲ. ನಾವು ಕೂಡ ಕೊರೋನ ತಡೆಯುವ ನಿಟ್ಟಿನಲ್ಲಿ ನಿರ್ಧಾರ ಮಾಡಬೇಕಿದೆ ಎಂದು ಹಾಸನ ಜನ ಹೊಸ ಲಾಕ್ಡೌನ್ಗೆ ಸ್ವಯಂ ಪ್ರೇರಿತವಾಗಿ ಮುಂದಾಗಿರೋ ಸ್ವಾಗತಾರ್ಹ.