ತೀವ್ರ ಕುತೂಹಲ ಮೂಡಿಸಿದ್ದ ವಾಯುವ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಕೊನೆಗೂ ಬಿಜೆಪಿ ನಾಯಕರಿಗೆ ಮಣ್ಣು ಮುಕ್ಕಿಸುವಲ್ಲಿ ಕಾಂಗ್ರೆಸ್ ಹುರಿಯಾಳು, ಮಾಜಿ ಸಚಿವ, ಮೀಸೆ ಮಾವ ಪ್ರಕಾಶ ಹುಕ್ಕೇರಿ ಯಶಸ್ವಿಯಾಗಿದ್ದಾರೆ. ಭರ್ಜರಿ ಜಯ ದಾಖಲಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಹೌದು ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಯಾರೂ ಅಭ್ಯರ್ಥಿಗಳು ಸಿಗದೇ ಇರುವುದಕ್ಕೆ ಸೋತು ಸುಣ್ಣವಾಗಿರುವ ಮುದಿ ಎತ್ತು ತಂದು ಕಾಂಗ್ರೆಸ್ ನಾಯಕರು ಚುನಾವಣೆಗೆ ನಿಲ್ಲಿಸಿದ್ದಾರೆ, ಪ್ರಕಾಶ ಹುಕ್ಕೇರಿ ಎಸ್ಎಸ್ಎಲ್ಸಿ ಫೇಲ್ ಎಂದೆಲ್ಲಾ ವಯಕ್ತಿಕವಾಗಿ ಪ್ರಕಾಶ ಹುಕ್ಕೇರಿ ಬಗ್ಗೆ ಬಿಜೆಪಿ ನಾಯಕರು ಲೇವಡಿ ಮಾಡಿದ್ದರು. ಆದರೆ ಪ್ರಕಾಶ ಹುಕ್ಕೇರಿ ಇದ್ಯಾವ ಟೀಕೆ ಟಿಪ್ಪಣಿಗಳಿಗೂ ಉತ್ತರಿಸುವ ಗೋಜಿಗೆ ಹೋಗದೇ ಶಿಕ್ಷಕ ಮತದಾರರನ್ನು ತಮ್ಮತ್ತ ಸೆಳೆಯಲು ನಿರಂತರವಾಗಿ ಪ್ರಯತ್ನಿಸಿದರು.
ಇದರಲ್ಲಿ ಕೊನೆಗೂ ಪ್ರಕಾಶ ಹುಕ್ಕೇರಿ ಯಶಸ್ವಿಯಾಗಿದ್ದಾರೆ. ಎರಡು ಬಾರಿ ಗೆದ್ದಿದ್ದ ಬಿಜೆಪಿ ಅಭ್ಯರ್ಥಿ ಅರುಣ ಶಾಹಪುರ ಸೋಲಿಸುವ ಮೂಲಕ ಬಿಜೆಪಿ ನಾಯಕರಿಗೆ ತಾವೊಬ್ಬ ಜನನಾಯಕ ಎಂಬುದನ್ನು ನಿರೂಪಿಸಿದ್ದಾರೆ. ಬುಧವಾರ ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ನಡೆದ ಮತ ಏಣಿಕೆಯಲ್ಲಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಪ್ರಕಾಶ ಹುಕ್ಕೇರಿ ಕೊನೆ ಸುತ್ತಿನವರೆಗೂ ಹಿಂದಿರುಗಿ ನೋಡಲೇ ಇಲ್ಲ. ಅಂತಿಮವಾಗಿ ಮತಗಳ ಅಂತರದಿಂದ ಮೀಸೆ ಮಾವ ಗೆದ್ದು ಬೀಗಿದರು. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಅರುಣ ಶಾಹಪುರ್ಗೆ ತೀವ್ರ ನಿರಾಸೆ ಆದಂತಾಯಿತು. ಮತ ಏಣಿಕೆ ಪೂರ್ಣವಾಗುವ ಮುನ್ನವೇ ಮತ ಏಣಿಕೆ ಕೇಂದ್ರದಿಂದ ತಮ್ಮ ಆಪ್ತರೊಂದಿಗೆ ಅರುಣ ಶಾಹಪುರ ಹೊರ ನಡೆಯುವ ಮೂಲಕ ತಮ್ಮ ಸೋಲನ್ನು ಒಪ್ಪಿಕೊಂಡರು.
ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ 11460 ಮತಗಳನ್ನು ಪಡೆದುಕೊಂಡರೆ, ಬಿಜೆಪಿ ಅಭ್ಯರ್ಥಿ ಅರುಣ್ ಶಹಾಪುರ 6405 ಮತ ಪಡೆದುಕೊಂಡರು. ಇನ್ನು ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ್ ಲೋಣಿ 544 ಮತ, ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ 1009 ಮತಗಳನ್ನು ಪಡೆದುಕೊಂಡಿದ್ದಾರೆ. ಈ ಮೂಲಕ 5055 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಅರುಣ ಶಾಹಪುರ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರು.