ಬೆಳಗಾವಿ: ವಿಧಾನ ಪರಿಷತ್ನ ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯ ಮತ ಎಣಿಕೆಯಲ್ಲೂ ಗೊಂದಲ ಸೃಷ್ಟಿಯಾಗಿದೆ. ಮತ ಕ್ಷೇತ್ರದ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಾಗಿ ಕಂಡುಬಂದಿದ್ದು, 71 ಮತಗಳು ಇರಬೇಕಿದ್ದ ಪೆಟ್ಟಿಗೆಯಲ್ಲಿ 76 ಮತಗಳು ಹೇಗೆ ಬಂತು?
ಎಂದು ಪಕ್ಷೇತರ ಅಭ್ಯರ್ಥಿ ಎನ್.ಬಿ.ಬನ್ನೂರ ಆಕ್ಷೇಪಿಸಿದ್ದಾರೆ.
ಬಾಗಲಕೋಟೆಯ ಇಳಕಲ್ ಮತ ಪೆಟ್ಟಿಗೆಯಲ್ಲಿ 5 ಮತಗಳು ಹೆಚ್ಚಿಗೆ ಬಂದಿವೆ. ಬಿಜೆಪಿ ಅಭ್ಯರ್ಥಿ ಅರುಣ ಶಾಹಾಪುರ ಪರ 5 ಮತಗಳು ಹೆಚ್ಚಿಗೆ ಬಂದಿದೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಎನ್.ಬಿ.ಬನ್ನೂರ, ಈ ಬಗ್ಗೆ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲ, ಮತಗಟ್ಟೆ ಸಂಖ್ಯೆ 3ರ ವಾಯುವ್ಯ ಶಿಕ್ಷಕರ ಕ್ಷೇತ್ರದ ಮತಪೆಟ್ಟಿಗೆಯಲ್ಲಿ ಮೂರು ಪದವೀಧರ ಮತಗಳು ಕಂಡು ಬಂದಿವೆ.
ಮತ ಎಣಿಕೆ ಆರಂಭಕ್ಕೂ ಮುನ್ನವೇ ಕೇಂದ್ರದಲ್ಲಿ ಬೆಳಗ್ಗೆ ಕೆಲಕಾಲ ಗೊಂದಲ ಉಂಟಾಗಿತ್ತು. ಮತಗಟ್ಟೆ ನಂಬರ್ 4ರ ಮತಪೆಟ್ಟಿಗೆಯ ಮೇಲೆ ಕಟ್ಟಿದ ಬಟ್ಟೆ ಬದಲಾವಣೆಯಾಗಿತ್ತು. ಪೆಟ್ಟಿಗೆ ಮೇಲೆ ಸೀಲ್ ಹಾಕದಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಲೋನಿ ಪರ ಏಜೆಂಟರು ಆಕ್ಷೇಪ ವ್ಯಕ್ತಪಡಿಸಿದರು. ಜೋರಾಗಿ ಗದ್ದಲ ಶರುವಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪ್ರಾದೇಶಿಕ ಆಯುಕ್ತ ಆದಿತ್ಯ ಆಮ್ಲಾನ್ ಬಿಸ್ವಾಸ್, ಸದಲಗಾ- ಚಿಕ್ಕೋಡಿ ಭಾಗದ ಎರಡು ಮತಪೆಟ್ಟಿಗೆ ಮೇಲೆ ಈ ರೀತಿ ಆಗಿದೆ. ಮತದಾನ ಮುಗಿದ ಬಳಿಕ ಇದೇ ಬಟ್ಟೆಯನ್ನೇ ಸುತ್ತಲಾಗಿತ್ತು. ಇದರಲ್ಲಿ ಅನುಮಾನ ಬೇಡ ಎಂದು ಮನವೊಲಿಸಿದರು.