ಕೆಪಿಸಿಸಿ ಸಾರಥಿಗೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಕ್ರಮ ಹಣ ವರ್ಗಾವಣೆ, ಬೇನಾಮಿ ಆಸ್ತಿ ಪ್ರಕರಣ ಮರುಜೀವ ಪಡೆದುಕೊಂಡಿದೆ. ವಿಧಾನಸಭಾ ಚುನಾವಣೆ ತಯಾರಿಯಲ್ಲಿರೋ ಡಿಕೆ ಶಿವಕುಮಾರ್ಗೆ ಚಾರ್ಜ್ಶೀಟ್ ಶಾಕ್ ಎದುರಾಗಿದೆ.
ಡಿ.ಕೆ.ಶಿವಕುಮಾರ್ ಮುಂದಿನ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಾ, ಪಕ್ಷ ಸಂಘಟನೆ ಮಾಡುತ್ತಾ ಬ್ಯುಸಿಯಾಗಿದ್ದಾರೆ.
ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ತರಲೇಬೇಕು ಅಂತಾ ಪಣ ತೊಟ್ಟಿದ್ದಾರೆ. ಸರ್ಕಾರ ರಚನೆ ಕಸರತ್ತಿಗಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವ್ರಂತೆ ಓಡಾಡ್ತಿದ್ದಾರೆ. ಆದ್ರೆ ಡಿಕೆ ಶಿವಕುಮಾರ್ ಅವರ ಈ ಸ್ಪೀಡ್ಗೆ ಜಾರಿ ನಿರ್ದೇಶನಾಲಯ ಬ್ರೇಕ್ ಹಾಕಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಮತ್ತೆ ಸಂಕಷ್ಟ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಮತ್ತೆ ಇ.ಡಿ ಸಂಕಷ್ಟ ಎದುರಾಗಿದೆ. 2019ರಲ್ಲಿ ನಡೆದಿದ್ದ ರೇಡ್ ಸಂಬಂಧ ಜಾರಿ ನಿರ್ದೇಶನಾಲಯ ದೆಹಲಿಯ ಇ.ಡಿ ವಿಶೇಷ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಕೆ ಮಾಡಿದೆ. ಅಕ್ರಮ ಹಣ ವರ್ಗಾವಾಣೆ ಕೇಸ್ನ ಉರುಳು ಡಿಕೆ ಶಿವಕುಮಾರ್ ಕುತ್ತಿಗೆಗೆ ಮತ್ತಷ್ಟು ಬಿಗಿದಿದೆ.
ಚಾರ್ಜ್ಶೀಟ್ನಲ್ಲೇನಿದೆ?
ಡಿಕೆ ಶಿವಕುಮಾರ್ ವಿರುದ್ಧ ಒಟ್ಟು 50ರಿಂದ 55 ಪುಟಗಳ ಚಾರ್ಜ್ಶೀಟ್ ಸಲ್ಲಿಕೆ ಮಾಡಲಾಗಿದೆ. ದೆಹಲಿಯ ರೋಸ್ ಅವೆನ್ಯೂ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಲಾಗಿದ್ದು, ಚಾರ್ಜ್ಶೀಟ್ ಜೊತೆಗೆ ಒಂದು ಸಣ್ಣ ಟ್ರಂಕ್ನಲ್ಲಿ ಕೇಸ್ಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲಾಗಿದೆ. ಚಾರ್ಜ್ಶೀಟ್ನಲ್ಲಿ PMLA ಕಾಯ್ದೆ ಹಾಗೂ ಐಪಿಸಿ ಸೆಕ್ಷನ್ 120b ಅಡಿ ಕ್ರಿಮಿನಲ್ ಪಿತೂರಿ ಅಂತಾನೂ ಆರೋಪ ಮಾಡಲಾಗಿದೆ. ಈ ಸೆಕ್ಷನ್ಗಳ ಬಗ್ಗೆ ಶನಿವಾರ ಬೆಳಗ್ಗೆ ಇಡಿ ವಕೀಲರಿಂದ ವಾದ ಮಂಡನೆಯಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಚಾರ್ಜ್ಶೀಟ್ನಲ್ಲಿ ಆರೋಪಿ ನಂಬರ್ 1 ಅಂತಾ ಉಲ್ಲೇಖಿಸಲಾಗಿದೆ. ಶರ್ಮಾ ಟ್ರಾವೆಲ್ಸ್ ಮಾಲೀಕ ಸುನಿಲ್ ಶರ್ಮಾ ಆರೋಪಿ ನಂಬರ್ 2, ಡಿಕೆ ಶಿವಕುಮಾರ್ ದೂರ ಸಂಬಂಧಿ ಸಚಿನ್ ನಾರಾಯಣ್ ಆರೋಪಿ ನಂಬರ್ 3, ಹಾಗೂ ದೆಹಲಿಯ ಕರ್ನಾಟಕ ಭವನ ಸಿಬ್ಬಂದಿ ಆಂಜನೇಯ ಹನುಮಂತು ಪ್ರಕರಣದಲ್ಲಿ 4ನೇ ಆರೋಪಿ ಅಂತಾ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ನಾಲ್ವರ ಜೊತೆಗೆ ಇತರ ಹಲವು ಆರೋಪಿಗಳ ಹೆಸ್ರನ್ನೂ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಚಾರ್ಜ್ಶೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಬ್ರದರ್ಸ್, ಚಾರ್ಜ್ಶೀಟ್ ಸಲ್ಲಿಕೆಗೆ ನಾವು ಹೆದರುವುದಿಲ್ಲ ಅಂತಾ ಸವಾಲು ಹಾಕಿದ್ದಾರೆ.