ಬೆಂಗಳೂರು: ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಗಂಗಾ ಆರತಿಯಂತೆಯೇ ದಕ್ಷಿಣ ಭಾರತದಲ್ಲಿ ತುಂಗಾ ಆರತಿ ಬೆಳಗಬೇಕಿದೆ. ಹೀಗಾಗಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 30 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಸಿ.ಎಂ .ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹರಿಹರದ ಪಂಚಮಸಾಲಿ ಗುರುಪೀಠದ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಹರಜಾತ್ರೆಯ ಧ್ವನಿಸುರುಳಿ, ಟಿ ಶರ್ಟ್ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಂಗಾ ಆರತಿ ಮಂಟಪಗಳ ನಿರ್ಮಾಣ ಯೋಜನೆಗೆ ಹರಜಾತ್ರೆಯ ಸಂದರ್ಭದಲ್ಲಿಯೇ ಅಂದರೆ, ಜನವರಿ 14 ಹಾಗೂ 15ರಂದು ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.
ಪಂಚಮಸಾಲಿ ಸಮುದಾಯಕ್ಕೆ ದೊಡ್ಡ ಇತಿಹಾಸವೇ ಇದೆ. ಈ ಸಮುದಾಯದ ಜನ ಕೃಷಿಯನ್ನೇ ಜೀವನಾಧಾರವಾಗಿ ನಂಬಿದ್ದಾರೆ. ಆದರೆ, ಈ ಸಮಾಜದ ಜನರು 21ನೇ ಶತಮಾನದಲ್ಲಿ ಎಲ್ಲ ರಂಗದಲ್ಲಿಯೂ ಗುರುತಿಸಿಕೊಂಡು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿನಲ್ಲಿಯೇ ಶ್ರೀಗಳು ಹೊಸ ಹೆಜ್ಜೆ ಹಾಕಿದ್ದಾರೆ. ಅವರು ಸಮಾಜಕ್ಕೆ ತಮ್ಮ ಬದ್ಧತೆ ಹಾಗೂ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ. ಅವರು ಇಡೀ ಸಮುದಾಯಕ್ಕೆ ಹೊಸ ಕಲ್ಪನೆಯನ್ನು ಬಿತ್ತುತ್ತಿದ್ದಾರೆ. ಅವರ ನೇತೃತ್ವದಲ್ಲಿ ಹರಜಾತ್ರೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಪ್ರಶಂಸನೀಯ. ಶ್ರೀಗಳು ಪೀಠ ಏರಿದ ಆರಂಭದಲ್ಲಿಯೇ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದವರೆಗೂ ಪಾದ ಯಾತ್ರೆ ನಡೆಸಿ ಸಮಾಜಕ್ಕೆ ಹೊಸ ಕಲ್ಪನೆ ಬಿತ್ತಿದ್ದಾರೆ ಎಂದು ಹೇಳಿದ್ದಾರೆ.