ದಕ್ಷ, ಖಡಕ್ ಅಧಿಕಾರಿ ಎಂದೇ ಹೆಸರು ಪಡೆದಿರುವ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಇತ್ತೀಚಿಗೆ ಸಿನಿಮಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಸಿನಿಮಾ ಈವೆಂಟ್ ನಲ್ಲಿ ಕಾಣಿಸಿಕೊಂಡಿದ್ದ ರವಿ ಚನ್ನಣ್ಣನವರ್ ಆ ಸಮಯದಲ್ಲಿ ತನ್ನ ಹಳೆಯ ದಿನಗಳನ್ನು ಮೆಲುಕು ಹಾಕಿ ಅಚ್ಚರಿ ಮೂಡಿಸಿದರು. ರವಿ ಡಿ ಚನ್ನಣ್ಣನವರ್ ಅವರ ಬಗ್ಗೆ ಯಾರಿಗೂ ಗೊತ್ತಿರದ ಕೆಲವು ಇಂಟ್ರಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದರು.
ಅನೇಕರಿಗೆ ಮಾದರಿಯಾಗಿರುವ ರವಿ ಡಿ ಚನ್ನಣ್ಣನವರ್ ಒಂದು ಕಾಲದಲ್ಲಿ ಸಿನಿಮಾ ಬ್ಲಾಕ್ ಟಿಕೆಟ್ ಮಾರುತ್ತಿದ್ದ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಡಾರ್ಲಿಂಗ್ ಕೃಷ್ಣ, ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ನಟನೆಯ ದಿಲ್ ಪಸಂದ್ ಸಿನಿಮಾದ ಪ್ರೆಸ್ ಮೀಟ್ ಆಯೋಜಿಸಲಾಗಿತ್ತು. ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ರವಿ ಡಿ. ಚನ್ನಣ್ಣನವರ್ ಅವರು ವಿಶೇಷ ಅತಿಥಿಯಾಗಿ ಭಾಗಿಯಾಗಿದ್ದರು. ಅಂದಹಾಗೆ ರವಿ ಡಿ. ಚನ್ನಣ್ಣನವರ್ ಅವರ 13 ವರ್ಷಗಳ ಸರ್ವೀಸ್ ನಲ್ಲಿ ಒಂದು ಸಿನಿಮಾ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದು ಇದೇ ಮೊದಲು. ಆ ವೇದಿಕೆಯಲ್ಲಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಯಾರಿಗೂ ಗೊತ್ತಿಲ್ಲದ ಬ್ಲಾಕ್ ಟಿಕೆಟ್ ಮಾರಿದ್ದ ಕಥೆಯನ್ನು ತೆರೆದಿಟ್ಟರು.
ರವಿ ಡಿ ಚನ್ನಣ್ಣನವರ್ ಅವರಿಗೆ ನಟನೆ, ಸಿನಿಮಾ ಬಗ್ಗೆ ಅಪಾರ ಆಸಕ್ತಿ ಇದೆ ಎನ್ನುವ ವಿಚಾರ ಬಹಿರಂಗವಾಗಿದೆ. ಹಲವು ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಲೇಜು ದಿನಗಳಿಂದಲೂ ಸಿನಿಮಾಗಳು ಅವರ ಮೇಲೆ ಬಹಳ ಪ್ರಭಾವ ಬೀರಿವೆ. ಡಾ. ರಾಜ್ಕುಮಾರ್ ಅವರ ‘ಮಯೂರ’ ಸಿನಿಮಾ ನೋಡಿ ಅವರು ಸ್ವಾಭಿಮಾನದ ಪಾಠ ಕಲಿತಿರುವುದಾಗಿ ಹೇಳಿದರು.
ಇದೇ ಸಮಯದಲ್ಲಿ ರವಿ ಚನ್ನಣ್ಣನವರ್, “ಎಲ್ಲೂ ಹೇಳಲಾರದ ಒಂದು ಸತ್ಯವನ್ನು ನಾನು ಇಂದು ಹೇಳುತ್ತಿದ್ದೇನೆ. ನಾನು ಗದಗದಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದೆ. ಮಹಾಲಕ್ಷ್ಮೀ, ಶಾಂತಿ ಚಿತ್ರಮಂದಿಗಳಲ್ಲಿ ಬ್ಲಾಕ್ ಟಿಕೆಟ್ ಮಾರಿದ್ದೆ. ಅಸುರ ಸಿನಿಮಾ ರಿಲೀಸ್ ಆದಾಗ ನಾನು ಪ್ರಥಮ ಪಿಯುಸಿ ಹುಡುಗ. ಯಜಮಾನ, ದಿಲ್ ಕಾ ರಿಶ್ತಾ, ಅಂಜಲಿ ಗೀತಾಂಜಲಿ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ತೆಗೆದುಕೊಂಡು ಬರುತ್ತಿದ್ದೆ” ಎಂದು ಬ್ಲಾಕ್ ಟಿಕೆಟ್ ಮಾರಿದ್ದ ವಿಚಾರವನ್ನು ಬಹಿರಂಗ ಪಡಿಸಿದರು.
ನಾಟಕಗಳ ಜೊತೆ ನಂಟು ಹೊಂದಿರುವ ರವಿ ಡಿ. ಚನ್ನಣ್ಣನವರ್ ಇತ್ತೀಚಿಗೆ ಬರಹಗಳನ್ನು ಕೂಡ ಆರಂಭಿಸಿದ್ದಾರೆ. ಅನೇಕ ಕಥೆಗಳನ್ನು ಅವರು ಬರೆದಿದ್ದಾರೆ. ಆದರೆ ಇನ್ನೂ ಪ್ರಕಟಗೊಂಡಿಲ್ಲ. “ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ” ಎಂದು ಹೇಳಿದರು.
ಇನ್ನು ಡಾರ್ಲಿಂಗ್ ಕೃಷ್ಣ ನಟನೆಯ ದಿಲ್ ಪಸಂದ್ ಚಿತ್ರದ ಬಗ್ಗೆ ಹೇಳಬೇಕೆಂದರೆ ಚಿತ್ರಕ್ಕೆ ಶಿವ ತೇಜಸ್ ನಿರ್ದೇಶನ ಮಾಡುತ್ತಿದ್ದಾರೆ. ಸುಮಂತ್ ಕ್ರಾಂತಿ ನಿರ್ಮಾಣದಲ್ಲಿ ಮೂಡಿಬರುತ್ತಿದೆ. ಉಳಿದಂತೆ ಚಿತ್ರದಲ್ಲಿ ತಬಲ ನಾಣಿ, ಸಾಧು ಕೋಕಿಲ ಸೇರಿದಂತೆ ಮುಂತಾದ ಖ್ಯಾತ ನಟರು ಅಭಿನಯಿಸುತ್ತಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ.