ಅಕ್ಟೋಬರ್ 10ರಂದು ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಸಿಪಿ ಡಾ.ವಿಕ್ರಮ್ ಆಮ್ಟೆ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಉಮಾ ಸಾಲಿಗೌಡರ ಸೇರಿದಂತೆ ಹಲವು ಅಧಿಕಾರಿಗಳು, ಎಸ್ಸಿ, ಎಸ್ಟಿ ಸಮಾಜದ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಮಾಜದ ಮುಖಂಡ ಸುರೇಶ ಗವನ್ನವರ ಎರಡು ದಿನ ಬ್ಯಾನರ್ ಕಟ್ಟಲು ನಮಗೆ ಯಾವುದೇ ರೀತಿ ಅಡ್ಡಿ ಪಡಿಸಬಾರದು.
ನಾವು ನಗರದ ವಿವಿಧೆಡೆ ಬ್ಯಾನರ್ ಕಟ್ಟಲು ನಮಗೆ ಅವಕಾಶ ನೀಡಬೇಕು. ಸಧ್ಯ ಕೊರೊನಾ ಸೋಂಕು ಕಡಿಮೆಯಾಗಿದೆ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಲು ವ್ಯವಸ್ಥೆ ಮಾಡಿಕೊಳ್ಳಬೇಕು. ಇನ್ನು ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಸಭಾಭವನದಲ್ಲಿಯೇ ಆಯೋಜಿಸಬೇಕು. ಅದೇ ರೀತಿ ಬೆಳಗಾವಿಯಲ್ಲಿ ನಮ್ಮದೇಯಾದ ಕುರುಹು ಉಳಿಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಮಾಜಿ ಜಿ.ಪಂ.ಸದಸ್ಯ ಯಲ್ಲಪ್ಪ ಕೋಳೇಕರ್ ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ವೇದಿಕೆಗೆ ಜಾರಕಿಹೊಳಿ ಸಹೋದರರ ತಂದೆ ದಿ.ಲಕ್ಷ್ಮಣರಾವ್, ತಾಯಿ ಭೀಮವ್ವ ಅವರ ಹೆಸರನ್ನು ಇಡಬೇಕು. ಅದೇ ರೀತಿ ವೇದಿಕೆ ಬ್ಯಾನರ್ನಲ್ಲಿ ಕೂಜಂತಂ ರಾಮ ರಾಮೇತಿ ಮಧುರ ಮಧುರಾಕ್ಷರಮ್, ಅರುಹ್ಯ ಕರವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಂ ಬರಹವನ್ನು ಬರೆಯಬೇಕು ಎಂದು ಮನವಿ ಮಾಡಿಕೊಂಡರು.
ಸಭೆಯಲ್ಲಿ ಎಸ್ಸಿ, ಎಸ್ಟಿ ಮುಖಂಡರಾದ ರಾಜಶೇಖರ್ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.