ಕೊರೊನಾ ಎರಡನೇ ಅಲೆ ಸಂದರ್ಭದಲ್ಲಿ ಬಾಗಿಲು ಹಾಕಿದ್ದ ಚಿತ್ರಮಂದಿರಗಳು ಆ ನಂತರ ಸರ್ಕಾರದ ಆದೇಶದಂತೆ 50% ನಿಯಮಕ್ಕೆ ಬದ್ಧವಾಗಿ ಕೆಲಸ ಮಾಡುತ್ತಿದ್ದವು. ಇದೀಗ ಸರ್ಕಾರವು ಚಿತ್ರಮಂದಿರಗಳ ಮೇಲೆ ಕೃಪೆ ತೋರಿದ್ದು 100% ಪ್ರೇಕ್ಷಕರಿಗೆ ಅವಕಾಶ ನೀಡಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಾತ್ರ.
ರಾಜ್ಯದ ಯಾವ ಜಿಲ್ಲೆಯಲ್ಲಿ ಕೊರೊನಾ ಶೇ 1ಕ್ಕಿಂತಲೂ ಕಡಿಮೆ ಪ್ರಸರಣ ಇದೆಯೋ ಆ ಜಿಲ್ಲೆಗಳಲ್ಲಿ ಮಾತ್ರವೇ ಚಿತ್ರಮಂದಿರಗಳು ಪೂರ್ಣವಾಗಿ ಬಾಗಿಲು ತೆರೆಯಬಹುದಾಗಿದೆ. ಯಾವ ಜಿಲ್ಲೆಗಳಲ್ಲಿ ಶೇ 1ಕ್ಕಿಂತಲೂ ಹೆಚ್ಚು ಕೊರೊನಾ ಪ್ರಸರಣ ಇದೆಯೊ ಅಲ್ಲಿ 50% ಸೀಟು ಆಕ್ಯುಪೆನ್ಸಿ ನಿಯಮದಡಿಯೇ ಕಾರ್ಯ ನಿರ್ವಹಿಸಬೇಕಿದೆ. ತಜ್ಞರ ಮಂಡಳಿಯೊಂದಿಗೆ ಸಭೆ ನಡೆಸಿದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆಯಿಂದಾಗಿ ಏಪ್ರಿಲ್ 7 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಸರ್ಕಾರ ಆದೇಶ ನೀಡಿತು. ಅದಾದ ಮೇಲೆ ಹಲವು ಮನವಿಗಳ ಬಳಿಕ ಜುಲೈ 19 ರಂದು 50% ಆಸನ ವ್ಯವಸ್ಥೆ ಬಳಸಿಕೊಂಡು ಕಾರ್ಯನಿರ್ವಹಿಸುವಂತೆ ಆದೇಶ ನೀಡಲಾಯಿತು. ಅದಾದ ಬಳಿಕ ಈಗ ಅಕ್ಟೋಬರ್ 1 ರಿಂದ 100% ಅನುಮತಿ ನೀಡಲಾಗಿದೆ ಆದರೆ ಅದೂ ಕೊರೊನಾ ಸಾಂಕ್ರಾಮಿಕ ಪ್ರಮಾಣ ಕಡಿಮೆ ಇರುವ ಕಡೆಗಳಲ್ಲಿ ಮಾತ್ರ.
ಈಗಿನ ಮಾಹಿತಿಯಂತೆ ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಹಲವು ಜಿಲ್ಲೆಗಳಲ್ಲಿ ಶೇ 1ಕ್ಕಿಂತಲೂ ಕಡಿಮೆ ಸರಾಸರಿ ಇದೆ ಹಾಗಾಗಿ ಹಲವು ಜಿಲ್ಲೆಗಳಲ್ಲಿ ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಸಿನಿಮಾಗಳನ್ನು ಪ್ರದರ್ಶಿಸಲಿವೆ.
‘ಭಜರಂಗಿ 2’ , ‘ಕೋಟಿಗೊಬ್ಬ 3’, ‘ಸಲಗ’, ‘ಚಾರ್ಲಿ 777’, ‘ವಿಕ್ರಾಂತ್ ರೋಣ’, ‘ಭೈರವ’, ‘ರತ್ನನ್ ಪರ್ಪಂಚ’ ಇನ್ನೂ ಹಲವು ಸಿನಿಮಾಗಳು ಬಿಡುಗಡೆಗಾಗಿ ಕಾಯುತ್ತಿವೆ. ಸರ್ಕಾರದ ಈ ಹೊಸ ಆದೇಶದ ಬಳಿಕ ಕೆಲವು ಸಿನಿಮಾಗಳು ತಮ್ಮ ಬಿಡುಗಡೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.