ಚಿಕ್ಕೋಡಿ: ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಗಲಭೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷ ಬಿ.ಆರ್.ಸಂಗಪ್ಪಗೋಳ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶಾಸಕರ ಮೇಲೆ ಮತ್ತು ಪೊಲೀಸ ಅಧಿಕಾರಿಗಳ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡರೇ ಬೆಂಗಳೂರು ಬಿಹಾರ ಆಗಿದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೀಳಿಸುವ ಹುನ್ನಾದ ಬಿಜೆಪಿ ಪಕ್ಷದಲ್ಲಿರುವ ಕೆಲವು ಸಚಿವರು ಮತ್ತು ಶಾಸಕರು ಷಡ್ಯಂತರ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕೊಮು ಗಲಭೆಗೆ ಬಿಜೆಪಿಯವರೇ ಕಾರಣವೆಂದು ಆಕ್ರೋಶ ವ್ಯಕ್ತ ಪಡಿಸಿದರು.
ದೆಹಲಿ, ಮುಂಬೈ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಮಾತ್ರ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದ್ಕಕೆ ರಾಜ್ಯ ಸರಕಾರ ಮತ್ತು ಆರೋಗ್ಯ ಇಲಾಖೆಯ ವೈಫಲ್ಯವೇ ಕಾರಣ ಎಂದರು.
ಬಿಜೆಪಿಯ ಒಳಜಗಳದಿಂದ ಸಚಿವರು ಮತ್ತು ಶಾಸಕರ ಕಿತ್ತಾಟದಿಂದ ರಾಜ್ಯ ಬಡವಾಗುತ್ತಿದ್ದು, ರಾಜ್ಯದ ಸಾಮಾನ್ಯ ಬಲಿಯಾಗುತ್ತಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾದಿಂದ ಹೆಚ್ಚು ಜನರು ಮೃತಪಟ್ಟಿದ್ದಾರೆ. ಚಿಕ್ಕೋಡಿ ಜಿಲ್ಲೆಯಾಗಿದ್ದರೇ ಚಿಕ್ಕೋಡಿಯಲ್ಲಿಯೇ ಜಿಲ್ಲಾ ಸರಕಾರಿ ಆಸ್ಪತ್ರೆ ಆರಂಭವಾಗುತ್ತಿತ್ತು. ಬೆಳಗಾವಿ ಜಿಲ್ಲೆಯ ಕೊನೆ ಹಳ್ಳಿಯ ಜನರು ಬೆಳಗಾವಿ ಸಾರ್ವಜನಿಕ ಆಸ್ಪತ್ರೆ ತಲುಪಲು ಸಾಧ್ಯವಾಗದೇ ನಡುದಾರಿಯಲ್ಲಿಯೇ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಒಂದು ವೇಳೆ ಚಿಕ್ಕೋಡಿ ಜಿಲ್ಲೆಯಾಗಿದ್ದರೇ ಅಥಣಿ ಜನರು ಚಿಕ್ಕೋಡಿಗೆ ಬಂದು ಸೂಕ್ತ ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕ್ಕೋಡಿ ಜಿಲ್ಲಾ ವ್ಯಾಪ್ತಿಯ ಜನಪ್ರತಿನಿಧಿಗಳು ಮತ್ತು ಸಚಿವರ ಇಚ್ಚಾಶಕ್ತಿ ಕೊರತೆಯಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ತುಕಾರಾಮ ಕೋಳಿ, ಬಸವರಾಜ ಡಾಕೆ, ಎಸ್.ವೈ.ಹಂಜಿ, ರೇವಪ್ಪ ತಳವಾರ, ತ್ಯಾಗರಾಜ ಕದಮ ಮುಂತಾದವರು ಉಪಸ್ಥಿತರಿದ್ದರು.