ಬೆಂಗಳೂರು: ನಗರದ ಬ್ಯಾಡರಹಳ್ಳಿ ಹಳ್ಳಿ ಠಾಣಾ ವ್ಯಾಪ್ತಿಯ ತಿಗರಪಾಳ್ಯದಲ್ಲಿ ನೆಲೆಸಿದ್ದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದು, ಘಟನೆಯಲ್ಲಿ ಮೂರು ವರ್ಷದ ಮಗು ಮಾತ್ರ ಜೀವಂತವಾಗಿ ಪತ್ತೆಯಾಗಿದೆ. ಕಳೆದ ಐದು ದಿನಗಳ ಹಿಂದೆ ಕುಟುಂಬಸ್ಥರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು, ಈ ವೇಳೆ ಮನೆಯಲ್ಲಿ 3 ವರ್ಷದ ಹೆಣ್ಣು ಮಗು ಮೃತದೇಹಗಳ ನಡುವೆಯೇ ಕಳೆದ ಐದು ದಿನಗಳಿಂದ ಕಾಲ ಕಳೆದಿರುವುದು ತಿಳಿದು ಬಂದಿದೆ.
ಕೌಟುಂಬಿಕ ಸಮಸ್ಯೆಯಿಂದಲೇ ಒಂದೇ ಮನೆಯ ಐವರು ಬಲಿಯಾದರ ಎಂಬ ಪ್ರಶ್ನೆ ಎದುರಾಗಿದೆ. ತಿಗರಪಾಳ್ಯದ ನಿವಾಸಿಯಾಗಿದ್ದ ‘ಶಾಸಕರ ಪತ್ರಿಕೆ’ಯ ಸಂಪಾದಕ ಶಂಕರ್ ಅವರ ಐವರು ಕುಟುಂಬಸ್ಥರು ಸದ್ಯ ಸಾವನ್ನಪ್ಪಿದ್ದು, ಸದ್ಯ ಬದುಕುಳಿದಿದ್ದ ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಳೆದ 20 ವರ್ಷಗಳಿಂದ ಶಂಕರ್ ಕುಟುಂಬಸ್ಥರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು ಎನ್ನಲಾಗಿದೆ. ಆದರೆ ಶಂಕರ್ ಅವರ ಕಿರಿಯ ಮಗಳು ಹಾಗೂ ಪತಿಯ ನಡುವೆ ಜಗಳ ಇತ್ತಂತೆ. ಇದೇ ಕಾರಣದಿಂದ ದಂಪತಿ ನಡುವೆ ಹಲವು ಬಾರಿ ರಾಜಿ ಸಂಧಾನ ನಡೆಸಿದ್ದರು ಎನ್ನಲಾಗಿದ್ದು, ಆದರೂ ಮಗಳು ಗಂಡನ ಮನೆಗೆ ಹೋಗಲು ನಿರಾಕರಿಸಿದ್ದರಂತೆ. ಇದರಿಂದ ಅಸಮಧಾನಗೊಂಡಿದ್ದ ಶಂಕರ್ ಅವರು, ಮಗಳನ್ನು ಗಂಡನ ಮನೆಗೆ ಹೋಗುವಂತೆ ಹೇಳಿದ್ದರು ಎನ್ನಲಾಗಿದೆ.
ಈ ನಡುವೆ ಕೆಲಸ ಕಾರಣ ಮನೆಯಿಂದ ಹೊರ ಹೋಗಿದ್ದ ಶಂಕರ್ ಅವರು, ನಿನ್ನೆ ಮನೆಗೆ ವಾಪಸ್ ಆಗಿದ್ದರಂತೆ. ಆದರೆ ಮನೆಯ ಬಳಿ ಬಂದು ಕುಟುಂಬಸ್ಥರಿಗೆ ಫೋನ್ ಮಾಡಿದರೆ ಎಲ್ಲರ ಫೋನ್ ಸ್ವಿಚ್ಆಫ್ ಆಗಿತ್ತು. ಇದರಿಂದ ಸ್ನೇಹಿತರ ಮನೆಗೆ ಹೋಗಿರಬಹುದು ಎಂದು ಮನೆ ಬಳಿ ಬಂದಿದ್ದರಂತೆ. ಆದರೆ ಇಂದು ಮತ್ತೊಮ್ಮೆ ಮನೆಯ ಬಳಿ ಬಂದಾಗ ಮನೆಯಿಂದ ಕೆಟ್ಟ ವಾಪಸೆ ಬರುತ್ತಿದ್ದ ಕಾರಣ ಘಟನೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಮನೆಯ ಬಾಗಿಲನ್ನು ಹೊಡೆದು ಒಳ ಪ್ರವೇಶ ಮಾಡಿದ್ದು, ಈ ವೇಳೆ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. 9 ತಿಂಗಳ ಮೊಮ್ಮಗ ಹಾಸಿವಿನಿಂದ ಸಾವನ್ನಪ್ಪಿದ್ದು, 3 ವರ್ಷದ ಮೊಮ್ಮಗಳು ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸದ್ಯ ಮಗುವನ್ನು ರಕ್ಷಣೆ ಮಾಡಿರುವ ಪೊಲೀಸರು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಪ್ರಕರಣದ ವಿಚಾರಣೆಯನ್ನು ಆರಂಭ ಮಾಡಿದ್ದು, ಶಂಕರ್ ಅವರ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪೊಲೀಸರ ತನಿಖೆಯ ಬಳಿಕವೇ ಘೋರ ದುರಂತದ ಹಿಂದಿನ ಕಾರಣ ಬೆಳಕಿಗೆ ಬರಬೇಕಿದೆ.