ಬೆಳಗಾವಿ: ಉಚಿತ ಶವಸಂಸ್ಕಾರ ಮಾಡುವ ಬಿಜೆಪಿ ಪ್ರಣಾಳಿಕೆ ಬಗ್ಗೆ ವ್ಯಂಗವಾಡಿರುವ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜನರು ಚಿರಂಜೀವಿಗಳಾಗಿದ್ದರಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದರು.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರು ಸತ್ತೇ ಇಲ್ಲ, ಶವಸಂಸ್ಕಾರ ಮಾಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರದಲ್ಲಿ ಸಾವು ಖಚಿತ ಅಂತಾ ಡಿ.ಕೆ.ಶಿವಕುಮಾರ್ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ಆಡಳಿತ ಮಾಡುವಾಗ ಜನರು ಚಿರಂಜೀವಿಗಳಾ? ಕಾಂಗ್ರೆಸ್ನ ಇಂತಹ ಹೇಳಿಕೆಯಿಂದಲೇ ಜನರು ಇವರನ್ನು ಸೋಲಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಚುನಾವಣೆ ಪ್ರಚಾರಕ್ಕೆ ಹೋಗಿ ಅಂತಾ ಕಾಂಗ್ರೆಸ್ನಲ್ಲಿ ಯಾರು ಸೂಚನೆ ಕೊಡಬೇಕು. ಡಿಕೆ ಶಿವಕುಮಾರ ಮಾತು ಯಾರೂ ಕೇಳುವದಿಲ್ಲ. ಇಲ್ಲಿಗೆ ಸಿದ್ದರಾಮಯ್ಯ ಯಾಕೆ ಬರಲಿಲ್ಲ? ಸೋಲುತ್ತೇವೆ ಎಂದು ಬೆಳಗಾವಿಗೆ ಯಾವ ನಾಯಕರು ಬರುತ್ತಿಲ್ಲ ಎಂದರು.
ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸತ್ತು ಹೋಗಿರುವ ಕಾಂಗ್ರೆಸ್ ಶವಸಂ ಸ್ಕಾರದ ಬಗ್ಗೆ ಅಲ್ಲದೇ ಮತ್ಯಾವುದರ ಬಗ್ಗೆ ಮಾತನಾಡುತ್ತೆ? ಬೆಳಗಾವಿ ಮಹಾನಗರ ಪಾಲಿಕೆಯಲ್ಲೂ ಕಾಂಗ್ರೆಸ್ ಬರಲ್ಲ. ಇಲ್ಲೂ ಸಹ ಅದು ಸತ್ತು ಹೋಗಿದೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಬಂದಿರುವ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷ ಮುಂದೆ ಏನು ಮಾಡಲಿದೆ ಎಂಬುದರ ಬಗ್ಗೆ ಹೇಳಿದ್ದರೆ ಚೆನ್ನಾಗಿತ್ತು. ಅದನ್ನ ಬಿಟ್ಟು ದಿ.ಸುರೇಶ್ ಅಂಗಡಿ ಅಂತ್ಯಸಂಸ್ಕಾರವನ್ನು ಬಿಜೆಪಿ ಹೀನಾಯವಾಗಿ ಮಾಡಿತು ಎಂದಿರುವುದನ್ನು ಕೇಳಿ ತುಂಬಾ ನೋವಾಗಿದೆ. ಡಿಕೆಶಿ ಶವಸಂಸ್ಕಾರದ ವಿಚಾರದಲ್ಲೂ ರಾಜಕಾರಣ ಮಾಡುತ್ತಿರುವ ಬಗ್ಗೆ ಬೇಸರವಾಯಿತು ಎಂದರು