ನವದೆಹಲಿ,ಆ.12-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೊಂದಲಗಳನ್ನು ನಿಭಾಯಿಸಲು ಸಮರ್ಥರಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡುವುದಿಲ್ಲ. ಆದರೆ ಗೊಂದಲಗಳನ್ನು ನಿಭಾಯಿಸಲು ಮುಖ್ಯಮಂತ್ರಿ ಸಮರ್ಥರಿದ್ದಾರೆ ಎಂದುಕೊಂಡಿದ್ದೇನೆ.
ಬೊಮ್ಮಾಯಿ ಅವರು ಮತ್ತು ನಾನು ಉತ್ತಮ ಗೆಳೆಯರು. ಮುಖ್ಯಮಂತ್ರಿಯಾದ ಬಳಿಕ ನನ್ನ ಮನೆಗೆ ಬಂದಿದ್ದರು. ಆಗ ರಾಜ್ಯ ಸರ್ಕಾರಕ್ಕೆ ನಮ್ಮಿಂದ ಏನೂ ತೊಂದರೆಯಾಗುವುದಿಲ್ಲ. ನೆಲ-ಜಲ ಭಾಷೆ ವಿಚಾರವಾಗಿ ಸಹಕಾರ ನೀಡುವುದಾಗಿ ಹೇಳಿದ್ದೆ. ರಾಜ್ಯದ ಜನರ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷಕ್ಕೆ ಎಲ್ಲದಕ್ಕೂ ಸಿದ್ದವಿದೆ ಎಂದು ಹೇಳಿದರು. ತಮ್ಮನ್ನು ಮುಖ್ಯಮಂತ್ರಿಗಳು ಭೇಟಿಯಾಗಿರುವ ಬಗ್ಗೆ ಶಾಸಕ ಪ್ರೀತಂ ಗೌಡ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಗೌಡರು, ನನ್ನನ್ನು ಅಷ್ಟೂ ಕೆಳಮಟ್ಟಕ್ಕೆ ಇಳಿಸಬೇಡಿ. ಮತ್ತೆ ಮತ್ತೆ ಆ ಬಗ್ಗೆ ಪ್ರಶ್ನೆ ಮಾಡಬೇಡಿ. ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಸಂಸತ್ ಅಧಿವೇಶನದ ಕಲಾಪಗಳು ಸುಗಮವಾಗಿ ನಡೆಯಲು ಎಲ್ಲ ಪಕ್ಷಗಳ ನಾಯಕರು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕು. ರಾಜ್ಯಸಭೆಯಲ್ಲಿ ತಮಗೆ ಮಾತನಾಡುವ ಅವಕಾಶ ಸಿಕ್ಕಿಲ್ಲ ಮುಂದಿನ ದಿನಗಳಲ್ಲಿ ಸಮಯ ಸಿಕ್ಕರೆ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡುವುದಾಗಿ ಹೇಳಿದರು. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಯಾವುದೇ ವಿಚಾರಗಳು ಚರ್ಚೆಯಾಗಿಲ್ಲ.
ಚರ್ಚೆ ಮಾಡಲು ವಿರೋಧ ಪಕ್ಷಗಳು ಹಾಗೂ ಆಡಳಿತ ಪಕ್ಷಗಳು ಅವಕಾಶ ಮಾಡಿಕೊಟ್ಟಿಲ್ಲ. ಈ ಬಾರಿಯ ರಾಜ್ಯ ಅಧಿವೇಶನದಲ್ಲಿ ಒಂದೂ ದಿನವೂ ಗೈರಾಗಿಲ್ಲ. ಎಲ್ಲ ದಿನದ ಕಲಾಪದಲ್ಲಿ ಭಾಗಿಯಾಗಿದ್ದೆ. ಶನಿವಾರದ ರಜಾ ದಿನದಲ್ಲಿ ವಾರಣಾಸಿಗೆ ಹೋಗಿ ಬಂದಿದ್ದಾಗಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು 12 ಮಹಿಳೆಯರಿಗೆ ಹಾಗೂ 8 ಮಂದಿ ಎಸ್ಸಿ, 12 ಎಸ್ಟಿ ಸಮುದಾಯದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಇದು ಸಾಮಾಜಿಕ ನ್ಯಾಯವೋ, ಚುನಾವಣಾ ತಂತ್ರವೋ ಗೊತ್ತಿಲ್ಲ. ಏನೇ ಇದ್ದರೂ ಪ್ರಧಾನಿಯವರ ನಿರ್ಧಾರವನ್ನು ಸ್ವಾಗತಿಸುತ್ತೇನೆ. ನಾನು ಪ್ರಧಾನಿಯಾಗಿದ್ದಾಗಲೂ ಇಂತಹ ಅವಕಾಶವನ್ನು ನೀಡಲಾಗಿತ್ತು ಎಂದರು.