ಹುಬ್ಬಳ್ಳಿ: ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ನೆರೆ ರಾಜ್ಯಗಳೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿ ಆದಷ್ಟು ಬೇಗ ಅನುಷ್ಠಾನಕ್ಕೆ ಯತ್ನಿಸುವುದಾಗಿ ಜವಳಿ ಮತ್ತು ಕೈಮಗ್ಗ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳಸಾ-ಬಂಡೂರಿಯಿಂದ 4 ಟಿಎಂಸಿ ಅಡಿ ನೀರು ಬಳಕೆಗೆ ಮಹದಾಯಿ ನ್ಯಾಯಾಧೀಕರಣ ಒಪ್ಪಿಗೆ ಸೂಚಿಸಿದೆ. ಇದರ ಅನುಷ್ಠಾನಕ್ಕಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ಅನುಮೋದನೆ ಪಡೆದು ಡಿಪಿಆರ್ಗೆ ಯೋಜಿಸಲಾಗಿದೆ. ನ್ಯಾಯಾಧೀಕರಣದಲ್ಲಿ ಆದ ಆದೇಶದಂತೆ ನೀರು ಪಡೆಯುವುದು ನಮ್ಮ ಹಕ್ಕು. ಕಾನೂನಾತ್ಮಕವಾಗಿರುವ ಸಮಸ್ಯೆಗಳನ್ನು ಪರಿಹರಿಸಲು ನೆರೆ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇರಿಸುವುದು ಅವಶ್ಯ. ಆತುರದ ನಿರ್ಧಾರ, ಹೇಳಿಕೆಗಳಿಂದ ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಆಗಬಹುದು. ನಮಗೆ ನೀರು ಬೇಕು. ಕಳಸಾ-ಬಂಡೂರಿ ವಿಷಯದಲ್ಲಿ ಗೊಂದಲದ ಹೇಳಿಕೆ ಕೊಡುವುದು ಬೇಡ ಎಂದರು.
ಅವಳಿ ನಗರಕ್ಕೆ 24/7 ಮತ್ತು ಜಿಲ್ಲೆಯ 388 ಹಳ್ಳಿಗಳಿಗೆ ಜಲಧಾರೆ, ಜಲಜೀವನ್ ಮಿಷನ್ ಮೂಲಕ ಗ್ರಾಮದ ಪ್ರತಿ ಮನೆಗೆ ನೀರು ಒದಗಿಸುವುದು. ಸ್ಮಾರ್ಟ್ ಸಿಟಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಒತ್ತು ಕೊಡುವೆ. ರೈತರ ಹೊಲಕ್ಕೆ, ಮನೆಗಳಿಗೆ ನೀರು, ಬೆಳೆ ನಷ್ಟ ಪರಿಹಾರ ಸೇರಿದಂತೆ ಅನೇಕ ಕೆಲಸ ಆಗಬೇಕಿದೆ. ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಆದ್ಯತೆಯನುಸಾರ ಆಡಳಿತ ಯಂತ್ರ ಚುರುಕುಗೊಳಿಸಲಾಗುವುದು.ಲಭ್ಯತೆಗೆ ಅನುಗುಣವಾಗಿ ಜಿಲ್ಲೆಯಲ್ಲಿನ ಕೋವಿಡ್-19ರ ಲಸಿಕೆ ಕೊರತೆ ನೀಗಿಸಿ ಸಮರ್ಪಕವಾಗಿ ದೊರಕಿಸುವ ವ್ಯವಸ್ಥೆ ಮಾಡುವೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮೊದಲಾದವರಿದ್ದರು