ಕಳೆದ ತಿಂಗಳು 19 ರಂದು ಸುರಪುರದ ದೀವಳಗುಡ್ಡದ ನಿವಾಸಿಯಾದ ಬಸ್ ಕಂಡಕ್ಟರ್ ಗೆ ಕೊರೋನಾ ವಕ್ಕರಿಸಿತ್ತು. ಸೋಂಕಿತ ನಿರ್ವಾಹಕ ಬಸ್ ಘಟಕ ಹಾಗೂ ಬಸ್ ನಿಲ್ದಾಣ ಮೊದಲಾದ ಕಡೆ ಓಡಾಡಿಕೊಂಡಿದ್ದರು. ಅಲ್ಲದೆ, ಸೋಂಕಿತ ವ್ಯಕ್ತಿಯ ಪತ್ನಿಗೂ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿತ್ತು. ಹೀಗಾಗಿ ಕ್ವಾರಂಟೈನ್ಗೆ ಒಳಗಾಗಿದ್ದ ಸೋಂಕಿತ ಬಸ್ ಕಂಡಕ್ಟರ್ ಹಾಗೂ ಆತನ ಪತ್ನಿ ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಆದರೆ, ಬಸ್ ಕಂಡಕ್ಟರ್ ನಿಂದ ಹರಡಿದ ಸೋಂಕಿನಿಂದ 16 ಜನರಿಗೆ ಇದೀಗ ಕೊರೋನಾ ವಕ್ಕರಿಸಿದೆ. ಬಸ್ ಘಟಕದಲ್ಲಿನ 7 ಜನರಿಗೆ ಹಾಗೂ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ ಮುಂಜಾಗ್ರತೆ ವಹಿಸಿ ಸುರಪುರ ಬಸ್ ಘಟಕ ಸೀಲ್ ಡೌನ್ ಮಾಡಲಾಗಿದೆ. ಸುರಪುರ ಬಸ್ ಘಟಕದಿಂದ ಯಾವುದೇ ಬಸ್ ಸಂಚಾರವಿರುವದಿಲ್ಲ ಎನ್ನಲಾಗಿದೆ.
ಸುರಪುರ ಬಸ್ ಘಟಕದಲ್ಲಿ 335 ಜನ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದು ಎಲ್ಲಾ ಸಿಬ್ಬಂದಿಗಳ ಸ್ಯಾಂಪಲ್ ಸಂಗ್ರಹ ಮಾಡಲಾಗುತ್ತಿದೆ. ಇಲ್ಲಿವರಗೆ 300 ಜನರ ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು ಅದರಲ್ಲಿ 60 ಜನರ ಸ್ಯಾಂಪಲ್ ವರದಿ ನೆಗೆಟಿವ್ ಬಂದಿದೆ. ಇದರಿಂದ ಸಿಬ್ಬಂದಿಗಳು ಸ್ವಲ್ಪ ನಿರಾಳರಾಗಿದ್ದಾರೆ.
ಸುರಪುರ ತಾಲೂಕು ಆರೋಗ್ಯಧಿಕಾರಿ ಡಾ.ಆರ್.ವಿ.ನಾಯಕ, “ಕಂಡಕ್ಟರ್ ಮೂಲಕ 16 ಜನರಿಗೆ ಕೊರೊನಾ ಬಂದಿದ್ದು 300 ಜನರ ಸ್ಯಾಂಪಲ್ ಸಂಗ್ರಹ ಮಾಡಲಾಗಿದೆ. ಅದರಲ್ಲಿ 60 ಜನರ ವರದಿ ನೆಗೆಟಿವ್ ಬಂದಿದೆ. ಜನರು ಯಾವುದೇ ಆತಂಕ ಪಡದೆ ಮಾಸ್ಕ್ ಧರಿಸಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಂಡರೆ ಕೊರೊನಾಗೆ ಭಯಪಡುವ ಅಗತ್ಯ ಇಲ್ಲ” ಎಂದು ತಿಳಿಸಿದ್ದಾರೆ.