ಲಕ್ನೋ, ಸೆಪ್ಟೆಂಬರ್ 01: ಉತ್ತರ ಪ್ರದೇಶದ ಫಿರೋಜಾಬಾದ್ನಲ್ಲಿ ಶಂಕಿತ ಡೆಂಗ್ಯೂನಿಂದ ಕಳೆದ ಹತ್ತು ದಿನದಲ್ಲೇ 53 ಮಂದಿ ಸಾವನ್ನಪ್ಪಿದ್ದು ಈ ಪೈಕಿ 45 ಮಂದಿ ಮಕ್ಕಳಾಗಿದ್ದಾರೆ. ನಗರ ಒಂದರಲ್ಲೇ 53 ಮಂದಿ ಶಂಕಿತ ಡೆಂಗ್ಯೂಗೆ ಬಲಿಯಾಗಿರುವ ಕಾರಣ ಸರ್ಕಾರದ ವಿರುದ್ದ ವಿರೋಧ ಪಕ್ಷಗಳು ವಾಗ್ದಾಳಿ ನಡೆಸಲು ಕಾರಣವಾಗಿ ಹೊರಹೊಮ್ಮಿದೆ.
ಫಿರೋಜಾಬಾದ್ನ ಮೆಡಿಕಲ್ ಕಾಲೇಜಿನಲ್ಲಿ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಫಿರೋಜಾಬಾದ್ನ ಮೆಡಿಕಲ್ ಕಾಲೇಜಿನಲ್ಲಿ ಹಲವಾರು ಮಕ್ಕಳು ಜ್ವರದಿಂದ ಬಳಲುತ್ತಿದ್ದು ಪೋಷಕರು ತಮ್ಮ ಮಕ್ಕಳನ್ನು ಉಳಿಸಿಕೊಳ್ಳಲು ಎಲ್ಲಾ ಯತ್ನಗಳನ್ನು ಮಾಡುತ್ತಿದ್ದಾರೆ. ಫಿರೋಜಾಬಾದ್ನ ಈ ಸರ್ಕಾರಿ ಆಸ್ಪತ್ರೆಗೆ ಜ್ವರದಿಂದ ಬಳಲುತ್ತಿದ್ದ ಆರು ವರ್ಷದ ಲಕ್ಕಿ ಎಂಬ ಬಾಲಕನಿಗೆ ಮೂರು ದಿನಗಳಿಂದ ತೀವ್ರ ಜ್ವರವಿದ್ದ ಕಾರಣ ಆ ಮಗುವಿನ ಪೋಷಕರು ಮಗುವನ್ನು ಆಸ್ಪತ್ರೆಗ ಕರೆತಂದಿದ್ದಾರೆ. ಆದರೆ ಮಗುವನ್ನು ಆಗ್ರಾಕ್ಕೆ ಕರೆದುಕೊಂಡು ಹೋಗುವಂತೆ ಈ ಸರ್ಕಾರಿ ಆಸ್ಪತ್ರೆಯ ವೈದ್ಯರುಗಳು ಹೇಳಿದ್ದಾರೆ ಎಂದು ಈ ಮಗುವಿನ ಮಾವ ಪ್ರಕಾಶ್ ಹೇಳಿದ್ದಾರೆ ಎಂದು ವರದಿಯಾಗಿದೆ. “ವೈದ್ಯರು ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದ ಹಿನ್ನೆಲೆ ನಾವು ಆಗ್ರಾಕ್ಕೆ ಕರೆದುಕೊಂಡು ಹೋಗಿದ್ದೇವೆ. ಆದರೆ ಆಗ್ರಾಕ್ಕೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮಗು ಸಾವನ್ನಪ್ಪಿದ್ದಾನೆ,” ಎಂದು ಆರು ವರ್ಷದ ಬಾಲಕ ಲಕ್ಕಿಯ ಮಾವ ಪ್ರಕಾಶ್ ಹೇಳಿದ್ದಾರೆ.
ಕೊರೊನಾ ಆಯ್ತು, ಈಗ ಈ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರದ ಭೀತಿ
ಮೂರು ದಿನಗಳ ಹಿಂದೆ ಜ್ವರದ ಕಾರಣದಿಂದಾಗಿ ತನ್ನ ಪುತ್ರಿ ಅಂಜಲಿಯನ್ನು ಕಳೆದುಕೊಂಡಿರುವ ಸುನಿಲ್ ಎಂಬವರು ಈಗ ಆಸ್ಪತ್ರೆಯಲ್ಲಿ ತನ್ನ ಮಗ ಅಬಿಜಿತ್ರನ್ನು ಉಳಿಸಿ ಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. “ಕಳೆದ ಆರು ದಿನಗಳ ಹಿಂದೆ ನನ್ನ ಇಬ್ಬರು ಮಕ್ಕಳಿಗೂ ಅಚಾನಕ್ ಆಗಿ ಜ್ವರ ಕಾಣಿಸಿಕೊಂಡಿತು. ನನ್ನ ಮಗಳು ಜ್ವರದಿಂದ ತೀರಿಕೊಂಡಿದ್ದಾಳೆ. ಮಗನನ್ನು ಆಸ್ಪತ್ರೆಎಗೆ ದಾಖಲು ಮಾಡಲಾಗಿದೆ,” ಎಂದು ಪೋಷಕ ಸುನಿಲ್ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಮಕ್ಕಳಲ್ಲಿ ವೈರಲ್ ಜ್ವರ ಹಾಗೂ ಡೆಂಗ್ಯೂ ಪತ್ತೆ
ಇನ್ನು ಈ ಬಗ್ಗೆ ಮೆಡಿಕಲ್ ಕಾಲೇಜು ಬಳಿ ಮಾಹಿತಿ ನೀಡಿರುವ ಮಕ್ಕಳ ತಜ್ಞ ಡಾ. ಎಲ್ ಕೆ ಗುಪ್ತಾ, “ಈ ಜ್ವರದಿಂದ ಬಳಲುತ್ತಿರುವ ಮಕ್ಕಳ ಪೈಕಿ ಹಲವು ಮಂದಿ ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದಾರೆ, ಇನ್ನು ಕೆಲವು ಮಕ್ಕಳಲ್ಲಿ ಡೆಂಗ್ಯೂ ಜ್ವರ ಕಂಡು ಬರುತ್ತಿದೆ,” ಎಂದು ತಿಳಿಸಿದ್ದಾರೆ.
ಫಿರೋಜಾಬಾದ್ನ ಮೆಡಿಕಲ್ ಕಾಲೇಜಿನಲ್ಲಿ ಪ್ರಸ್ತುತ 186 ಮಂದಿ ಆಸ್ಪತ್ರೆಗೆ ದಾಖಲು ಆಗಿದ್ದು, ಈ ಪೈಕಿ ಹೆಚ್ಚಿನ ರೋಗಿಗಳು ಮಕ್ಕಳಾಗಿದ್ದಾರೆ. ಕೊರೊನಾ ವೈರಸ್ ಸೋಂಕಿನ ಈ ಆತಂಕದ ವಾತಾವರಣದ ಹಿನ್ನೆಲೆ ಜಿಲ್ಲಾಧಿಕಾರಿ ಚಂದ್ರ ವಿಜಯ್ ಸಿಂಗ್, ಸೆಪ್ಟೆಂಬರ್ 6 ರವರೆಗೂ 1-8 ತರಗತಿಗಳ ಸರ್ಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.
ಫಿರೋಜಾಬಾದ್ ಮುಖ್ಯಮಂತ್ರಿ ಯೋಗಿ ಭೇಟಿ
ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿನ್ನೆ ಫಿರೋಜಾಬಾದ್ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ, “ಈ ಸಾವುಗಳಿಗೆ ನೈಜ ಕಾರಣ ಏನೆಂದು ಪತ್ತೆ ಹಚ್ಚಲು ತಂಡವನ್ನು ರಚನೆ ಮಾಡಲಾಗುವುದು. ಮೆಡಿಕಲ್ ಕಾಲೇಜಿನಲ್ಲಿ ಅಗತ್ಯವಿರುವ ಸಿಬ್ಬಂದಿಗಳು ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಕೂಡಾ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ,” ಎಂದು ಮಾಹಿತಿ ನೀಡಿದ್ದಾರೆ. ಇನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಫಿರೋಜಾಬಾದ್ನಲ್ಲಿ ಮಕ್ಕಳು ದಾಖಲಾಗಿರುವ ಆಸ್ಪತ್ರೆಗೆ ಕೂಡಾ ಭೇಟಿ ನೀಡಿದ್ದಾರೆ. ಹಾಗೆಯೇ ಜ್ವರದಿಂದ ಸಾವನ್ನಪ್ಪಿದ ಹಲವು ಮಕ್ಕಳ ನಿವಾಸಕ್ಕೂ ತೆರಳಿ ಪೋಷಕರಿಗೆ ಸಾಂತ್ವನ ಹೇಳಿ ಬಂದಿದ್ದಾರೆ. ಇನ್ನು ಮಕ್ಕಳ ಕುಟುಂಬದೊಂದಿಗೆ ಉತ್ತಮ ಒಡನಾಟ ಹೊಂದಿರುವ, ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಸಿರುವ ಬಿಜೆಪಿ ಶಾಸಕ ಮನಿಷ್ ಆಸಿಜಾ ಮಾತನಾಡಿ, “ಆಗಸ್ಟ್ 18 ರಂದು ಮೊದಲು ಜ್ವರ ಕಾಣಿಸಿಕೊಂಡಿದೆ,” ಎದು ತಿಳಿಸಿದ್ದಾರೆ.
ಯೋಗಿ ಸರ್ಕಾರದ ವಿರುದ್ದ ಪ್ರಿಯಾಂಕ ವಾಗ್ದಾಳಿ
ಉತ್ತರ ಪ್ರದೇಶ ಕೆಲವು ಭಾಗಗಳಲ್ಲಿ ಇತ್ತೀಚೆಗೆ ವೈರಲ್ ಜ್ವರ ಹಾಗೂ ಡೆಂಗ್ಯೂವಿನಿಂದ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ತಿಳಿಸುತ್ತದೆ. ಈ ವಿಚಾರದಲ್ಲಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡೆ ಪ್ರಿಯಾಂಕಾ ಗಾಂಧಿ ವಾದ್ರಾ, “ಈ ರೋಗ ಹರಡುವುದನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜನರಿಗೆ ಉತ್ತಮವಾದ ಚಿಕಿತ್ಸೆ ನೀಡಿ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ. ಹಾಗೆಯೇ ಉತ್ತರ ಪ್ರದೇಶದ ಫಿರೋಜಾಬಾದ್, ಮಥುರಾ, ಆಗ್ರಾ ಮತ್ತು ಇತರೆ ಹಲವು ಸ್ಥಳಗಳಲ್ಲಿ ಮಕ್ಕಳು ಸೇರಿದಂತೆ ಹಲವಾರು ಮಂದಿ ಸಾವನ್ನಪ್ಪುತ್ತಿರುವುದು ದುಖಃಕರ ವಿಚಾರ,” ಎಂದಿದ್ದಾರೆ.