ಬೆಂಗಳೂರು : ಕೊರೋನಾ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಕೇಂದ್ರ ಸರಕಾರವು ರಾಜ್ಯಕ್ಕೆ ಅನುಮತಿ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ. ಶುಕ್ರವಾರ ಕೇಂದ್ರದ ಆರೋಗ್ಯ ಸಚಿವ ಹರ್ಷವರ್ಧನ್ರೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಸುಧಾಕರ್, ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ನಡೆಯಲಿದೆ ಎಂದರು.
ಕೊರೊನಾ ಸೋಂಕು ಕಾಣಿಸಿಕೊಂಡರೆ ಆತಂಕ ಪಡುವ ಅಗತ್ಯ ಇಲ್ಲ. ಬಹಳ ಜನ ಕೊರೊನಾ ಸೋಂಕು ದೃಢಪಟ್ಟರೆ ಕಳಂಕ ಎಂದು ತಿಳಿದುಕೊಂಡಿದ್ದಾರೆ. ಕೊರೊನಾ ಸಹ ಬೇರೆ ವೈರಸ್ ಥರ ಒಂದು ವೈರಸ್. ಅದರಿಂದ ಸಹಜ ಜ್ವರ ಹೇಗೆ ಬರುತ್ತೋ ಇದೂ ಕೂಡಾ ಹಾಗೆ. ಶೇ.97 ಕೊರೊನಾ ಸೋಂಕಿತರು ವಾಸಿಯಾಗಿದ್ದಾರೆ ಎಂದು ತಿಳಿಸಿದರು
ಪ್ಲಾಸ್ಮಾ ಥೆರಪಿಗೆ ಕೇಂದ್ರದಿಂದ ಒಪ್ಪಿಗೆ ಸಿಕ್ಕಿದೆ. ಬೆಂಗಳೂರು ಮೆಡಿಕಲ್ ಕಾಲೇಜಿಗೆ ಅನುಮತಿ ದೊರೆತಿದ್ದು, ಶನಿವಾರವೇ ಪ್ಲಾಸ್ಮಾ ಥೆರಪಿಯನ್ನು ಆರಂಭ ಮಾಡಲಿದ್ದೇವೆ ಎಂದರು ಸೋಂಕಿತರ ಚಿಕಿತ್ಸೆಗಾಗಿ ತಮ್ಮ ರಕ್ತದ ಪ್ಲಾಸ್ಮಾ ನೀಡಲು ಡೋನಾರ್ ಸಹ ಸಿಕ್ಕಿದ್ದಾರೆ. ಹೀಗಾಗಿ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಾಳೆ ರಾಜ್ಯದ ಮೊದಲ ಪ್ಲಾಸ್ಮಾ ಥೆರಪಿ ನಡೆಯಲಿದೆ.
ಸೋಂಕಿನಿಂದ ಗುಣಮುಖರಾದವರ ರಕ್ತಕಣದಿಂದ ಪ್ಲಾಸ್ಮಾ ಬೇರ್ಪಡಿಸಿ ಅದನ್ನು ಬಳಸಿ ಇನ್ನೂ ಸೋಂಕು ಇರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದನ್ನೇ ಪ್ಲಾಸ್ಮಾ ಥೆರಪಿ ಎನ್ನುತ್ತಾರೆ. ದೇಶದಲ್ಲಿ ಮೊದಲ ಬಾರಿಗೆ ಇದನ್ನು ದೆಹಲಿಯಲ್ಲಿ ಪ್ರಯೋಗ ಮಾಡಲಾಯಿತು.
ಈ ಥೆರಪಿಯಿಂದ ಗುಣಾತ್ಮಕ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ವಿವಿಧ ರಾಜ್ಯಗಳು ಥೆರಪಿಗೆ ಅನುಮತಿ ಕೋರಿದ್ದವು. ರಾಜ್ಯದಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ 445 ಅಷ್ಟೇ ಪ್ರಕರಣಗಳ ವರದಿಯಾಗಿವೆ ಮತ್ತು ಈ ಪೈಕಿ 200ಕ್ಕೂ ಹೆಚ್ಚು ಜನರಿಗೆ ವಾಸಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.