ಬೆಂಗಳೂರು: ದೊಡ್ಡಬಸ್ತಿಯಲ್ಲಿ ಒಂದೇ ಒಂದು ಪಾಸಿಟಿವ್ ಪ್ರಕರಣದಿಂದ ಬೆಂಗಳೂರು ಆತಂಕಗೊಂಡಿತ್ತು. ಇಡೀ ದೊಡ್ಡಬಸ್ತಿ ಕೊರೊನಾ ಹಾಟ್ಸ್ಪಾಟ್ ಆಗುತ್ತಾ ಅನ್ನೋ ಆತಂಕ ಜನರನ್ನು ಕಾಡಿತ್ತು. ಆದರೆ ಜನರ ಸಹಕಾರ ಹಾಗೂ ಕೋವಿಡ್ ಕಮಾಂಡರ್ ಜಿ.ಶಿವಣ್ಣ ಅವರ ಮಾಸ್ಟರ್ ಪ್ಲಾನ್ನಿಂದ ಕೊರೊನಾ ಹಾಟ್ಸ್ಪಾಟ್ ಆಗೋದನ್ನೇ ತಪ್ಪಿಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ದೊಡ್ಡಬಸ್ತಿಯನ್ನ ನೋಡಿ ಪಾದರಾಯನಪುರದ ಜನ ಬುದ್ಧಿ ಕಲಿಯಬೇಕಿದೆ. ಏಪ್ರಿಲ್ 12ರಂದು ಈ ಏರಿಯಾದಲ್ಲಿ ಗರ್ಭಿಣಿ ಮಹಿಳೆಗೆ ಕೊರೊನಾ ಸೋಂಕು ಬಂದಿತ್ತು. ಇನ್ನೇನು ಇಡೀ ಏರಿಯಾಗೆ ಈ ಸೋಂಕು ಹಬ್ಬುತ್ತೆ ಅನ್ನೋ ಆತಂಕದಲ್ಲಿ ಈ ಏರಿಯಾದ ಜನರಿದ್ದರು. ಆದರೆ ದಕ್ಷಿಣ ವಲಯದ ಉಪ ವಿಭಾಗಾಧಿಕಾರಿ ಹಾಗೂ ದೊಡ್ಡಬಸ್ತಿಯ ಕೊರೊನಾ ಕಮಾಂಡರ್ ಡಾ.ಜಿ.ಶಿವಣ್ಣ ಮತ್ತವರ ತಂಡದ ಶ್ರಮದಿಂದ ಮತ್ಯಾವ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿಲ್ಲ.
ಬೆಂಗಳೂರು ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ಇಲ್ಲಿನ ಜನ, ಬರೋಬ್ಬರಿ 30 ದಿನ ಮನೆಯಿಂದ ಹೊರ ಬರಲೇ ಇಲ್ಲ. ಕೊರೊನಾ ವಾರಿಯರ್ಸ್ ಮನೆ ಮನೆಗಳಿಗೆ ಅಗತ್ಯ ವಸ್ತುಗಳನ್ನ ತಂದಾಗ ಮಾತ್ರ ಮನೆಯ ಬಾಗಿಲುಗಳು ಓಪನ್ ಮಾಡಿದ್ದು ಬಿಟ್ರೆ, 30 ದಿನವೂ ಕಂಪ್ಲೀಟ್ ಮನೆಯಲ್ಲೇ ಲಾಕ್ ಆಗಿದ್ದರು.
ಜನರ ಈ ಸಹಕಾರ, ಅಧಿಕಾರಿಗಳು, ವೈದ್ಯಾಧಿಕಾರಿಗಳ ಶ್ರಮ ಇಲ್ಲಿ ಯಶಸ್ವಿಯಾಯಿತು. ಪರಿಣಾಮ ಈ ಏರಿಯಾದಲ್ಲಿ ಅತೀ ವೇಗವಾಗಿ ಹಬ್ಬಬೇಕಿದ್ದ ಸೋಂಕನ್ನ ಕಂಟ್ರೋಲ್ ಮಾಡಿದರು. ಇದೀಗ ಕಂಟೈನ್ಮೆಂಟ್ ಝೋನ್ನಿಂದ ದೊಡ್ಡಬಸ್ತಿ ಜನರಿಗೆ ಮುಕ್ತಿ ಸಿಕ್ಕಿದ್ದು, ಜನ ನಿಟ್ಟುಸಿರುಬಿಟ್ಟಿದ್ದಾರೆ. ವಾಹನ ಸಂಚಾರವೂ ಸಹಜ ಸ್ಥಿತಿಗೆ ಬಂದಿದೆ ಎಂದು ಡಾ.ಜಿ. ಶಿವಣ್ಣ ತಿಳಿಸಿದರು.