ವಿಜಯಪುರ, ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಬಸವನಾಡಿನಲ್ಲಿ ಪ್ರವಾಹ ಭೀತಿ ಎದುರಾಗಿದೆ. ಮಹಾರಾಷ್ಟ್ರದಲ್ಲಿ ಉಗಮವಾಗುವ ಮೂರು ನದಿಗಳು ವಿಜಯಪುರ ಜಿಲ್ಲೆಯಲ್ಲಿ ಹರಿಯುತ್ತಿದ್ದೂ, ಮೂರೂ ನದಿಗಳು ಉಕ್ಕಿ ಹರಿಯುತ್ತಿವೆ. ಭೀಮಾ ನದಿಗೆ ಮಹಾರಾಷ್ಟ್ರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ಸಮಾನಾಂತರ ನಿರ್ಮಿಸಿರುವ ಎಲ್ಲ 8 ಬ್ಯಾರೇಜುಗಳೂ ಮುಳುಗಡೆಯಾಗಿವೆ. ಭೀಮಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ನದಿ ತೀರದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಪಾರ ಪ್ರಮಾಮದ ಜಮೀನಿಗೆ ನೀರು ನುಗ್ಗಿ ರೈತರನ್ನು ಕಂಗಾಲಾಗಿಸಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಸಮಾನಾಂತರ ಗಡಿಯಲ್ಲಿ ಎಂಟು ಬ್ಯಾರೇಜುಗಳಿದ್ದು, ಈಗ ಎಲ್ಲ ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಂಗಿ(ಕರ್ನಾಟಕ ವ್ಯಾಪ್ತಿ), ಔಜ-ಶಿರನಾಳ, ಚಿಂಚಪೂರ-ಧೂಳಖೇಡ(ಮಹಾರಾಷ್ಟ್ರ ವ್ಯಾಪ್ತಿ), ಚಣೆಗಾಂವ-ಬರೂರ, ಹಿಂಗಣಿ-ಆಳಗಿ(ಕರ್ನಾಟಕ ವ್ಯಾಪ್ತಿ ಹಾಗೂ ಖಾನಾಪುರ-ಪಡನೂರ ಮತ್ತು ಹಿಳ್ಳಿ-ಗುಬ್ಬೇವಾಡ(ಮಹಾರಾಷ್ಟ್ರ ವ್ಯಾಪ್ತಿ) ಬ್ಯಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಿ ಹೋಗಿವೆ.
ಪರಿಣಾಮ ಈ ಬ್ಯಾರೇಜುಗಳು ಮತ್ತು ಭೀಮಾ ನದಿಯ ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆೆ ನೀರು ನುಗ್ಗಿದೆ.
ಅಷ್ಟೇ ಅಲ್ಲ, ಈ ಬ್ಯಾರೇಜುಗಳ ಮೂಲಕ ಸಂಚರಿಸುವ ಕರ್ನಾಟಕ ಮತ್ತು ಮಹಾರಾಷ್ಟ್ರದ ಎರಡೂ ರಾಜ್ಯಗಳ ರೈತರು ಈಗ ಸುತ್ತುಬಳಸಿ ಈ ತಿರುಗಾಡುವ ಅನಿವಾರ್ಯತೆ ಎದುರಾಗಿದೆ. ಮಕ್ಕಳಿಗೆ ಸಿಗಬೇಕಾದ ಪೌಷ್ಟಿಕ ಆಹಾರ ಅಂಗನವಾಡಿ ಕಾರ್ಯಕರ್ತೆಯರ ಮನೆಗೆ
ಮತ್ತೊಂದೆಡೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಡೋಣಿ ನದಿಯೂ ಉಕ್ಕಿ ಹರಿದಿದ್ದು, ನದಿ ತೀರದ ಅಕ್ಕಪಕ್ಕದ ಗ್ರಾಮಗಳ ಸಾವಿರಾರು ಎಕರೆ ಜಮೀನಿಗೆ ನೀರು ನುಗ್ಗಿದೆ. ಪರಿಣಾಮ ಉಳ್ಳಾಗಡ್ಡೆ ಮತ್ತು ತೊಗರಿ ಬೆಳೆಹಾನಿಯಾಗಿದೆ.
ಮಳೆಬಂದಾಗ ಮಾತ್ರ ಹರಿಯುವ ಈ ಡೋಣಿ ನದಿಗೆ ನದಿ ಪಾತ್ರವೇ ಇಲ್ಲ. ಎಲ್ಲ ಕಡೆ ಹೂಳು ತುಂಬಿಕೊಂಡಿದ್ದು, ಹಳಿ ತಪ್ಪಿದ ರೈಲಿನಂತೆ ಮಳೆ ನೀರು ಬೇಕಾಬಿಟ್ಟಿಯಾಗಿ ನುಗ್ಗಿ ರೈತರ ಹೊಲಗಳಲ್ಲಿರುವ ಫಲವತ್ತಾದ ಮಣ್ಣು ಮತ್ತು ಬೆಳೆಯನ್ನು ಕೊಚ್ಚಿಕೊಂಡು ಹೋಗುತ್ತಿದೆ. ಈ ನದಿ ನೀರು ಉಪ್ಪು ಆಗಿರುವ ಕಾರಣ ಒಂದು ಬಾರಿ ಡೋಣಿ ನದಿ ನೀರು ಹರಿದು ಹೋದರೆ ಆ ಜಮೀನೂ ಕೂಡ ಜವಳುಗಟ್ಟಿದಂತಾಗಿ ಭೂಮಿಯ ಫಲವತ್ತತೆ ಹಾಳಾಗುತ್ತಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅತ್ತ ಕೃಷ್ಣಾ ನದಿಗೂ ನೀರಿನ ಒಳಹರಿವು ಹೆಚ್ಚಾಗಿದ್ದು, ಆಲಮಟ್ಟಿ ಜಲಾಶಯವೂ ಭರ್ತಿಯಾಗಿದೆ. ಕಳೆದ ಸುಮಾರು ಒಂದು ವಾರದಿಂದ ವಿಜಯಪುರ ಜಿಲ್ಲೆಯಲ್ಲಿಯೂ ಆಗಾಗ ಅಲ್ಲಲ್ಲಿ ಉತ್ತಮ ಮಳೆಯಾಗುತ್ತಿರುವುದು ರೈತರಲ್ಲಿ ಒಂದೆಡೆ ಹರ್ಷ ಮತ್ತೊಂದೆಡೆ ಆತಂಕಕ್ಕೆ ಕಾರಣವಾಗಿದೆ.