ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬ ಮಾತು ಬಿಜೆಪಿ ಪಾಳಯದಲ್ಲಿ ರಿಂಗಣಿಸಿದ್ದೇ ಬಂತು, ಕೇಸರಿ ಪಾಳಯದ ಶಾಸಕರು ಮತ್ತೆ ಸಿಡಿದೆದ್ದಿದ್ದಾರೆ. ಆಗಿದ್ದಾಗ್ಲಿ ಈ ಬಾರಿ ಸಚಿವ ಸ್ಥಾನ ಪಡೆದೇ ತೀರುತ್ತೇವೆ ಅಂತಾ ಜಿದ್ದಿಗೆ ಬಿದ್ದವರಂತೆ ಅಖಾಡಕ್ಕೆ ಇಳಿದು ಅಬ್ಬರಿಸ್ತಿದ್ದಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು, ಪಕ್ಷ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆದ ನಾಯಕರ ಸಭೆ ಕುರಿತಂತೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ಅವರು, ನಾವು ಸಭೆ ಮಾಡಿಲ್ಲ, ಊಟಕ್ಕೆ ಸೇರಿದ್ದೇವೆ. ಸಭೆ ಎಂದು ಹೇಳಬೇಡಿ. ಬೆಳಗಾವಿ ಸಭೆ ಬಗ್ಗೆ ನನಗೆ ಮಾಹಿತಿ ಇಲ್ಲ. ಟಿವಿಯಲ್ಲಿ ಮಾಹಿತಿ ನೋಡಿದ್ದೇನೆ. ಆದರೆ ಅಲ್ಲಿ ಏನು ಚರ್ಚೆ ನಡೆದಿದೆ ಎಂದು ಗೊತ್ತಿಲ್ಲ. ಮಾಹಿತಿ ಇಲ್ಲದೇ ಮಾತನಾಡೋದು ತಪ್ಪಾಗುತ್ತದೆ. ಪಕ್ಷದ ಒಳಿತಿಗೆ ಅವ್ರು ಸಭೆ ಮಾಡಿರಬಹುದು. ವರಿಷ್ಠರು ಎಲ್ಲವನ್ನೂ ನೋಡ್ತಿದ್ದಾರೆ.
ಸಂಪುಟ ವಿಸ್ತರಣೆ ವಿಚಾರಣೆಯಲ್ಲಿ ನಾನು ಆಕಾಂಕ್ಷಿ ಎಂದು ಹೇಳುವುದಿಲ್ಲ. ವರಿಷ್ಠರ ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ಬದ್ಧ. ಸಂಪುಟ ಪುನರ್ ರಚನೆಗೆ ಹೈಕಮಾಂಡ್ ಮತ್ತು ಸಿಎಂ ಅವರು ನಿರ್ಧಾರ ಮಾಡ್ತಾರೆ. ಬೆಳಗಾವಿ ಸಭೆ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡ್ತೀನಿ. ಕ್ಷೇತ್ರ ಅಭಿವೃದ್ಧಿ ಸಂಬಂಧ ಸಿಎಂ ಭೇಟಿ ಮಾಡಿದ್ದೇನೆ. ಇವತ್ತು ನಾನು, ಯತ್ನಾಳ್ ನೀರಾವರಿ ಬಗ್ಗೆ ಚರ್ಚೆಗೆ ಸೇರಿದ್ದೇವು. ಸಂಪುಟ ಪುನಾರಚನೆ ಬಗ್ಗೆ ವೈಯಕ್ತಿಕ ಅಭಿಪ್ರಾಯ ಇಲ್ಲ. ಸಿಎಂ ಭೇಟಿ ಮಾಡಿ ಅಭಿವೃದ್ಧಿ ಕುರಿತು ಮಾತಾಡಿದ್ದೇನೆ. ಕ್ಷೇತ್ರದ ಶಾಸಕನಾಗಿ ಭೇಟಿ ಮಾಡೋದು ನನ್ನ ಕರ್ತವ್ಯವಾಗಿದೆ ಎಂದರು.
ಇನ್ನು, ನಾವು ಯಾವುದೇ ಸಭೆಗೆ ಹೋಗೋದಿಲ್ಲ. ಸಿಎಂ ಕರೆದ ಸಭೆಗೆ ಮಾತ್ರ ಹೋಗ್ತೀವಿ. ಮಹೇಶ್ ಕುಮಟಳ್ಳಿ ಮತ್ತು ಶ್ರೀಮಂತ ಪಾಟೀಲ್ ಸಭೆಗೆ ಕರೆದಿದ್ದರು. ನಮಗೆ ಪ್ರೀತಿ ಇದ್ದ ಕಡೆ ಮಾತ್ರ ಹೋಗ್ತೀವಿ ಎಂದು ಬೆಳಗಾವಿ ಸಭೆ ಬಗ್ಗೆ ರಮೇಶ್ ಜಾರಕಿಹೊಳಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.