ನಾಗ್ಪುರ, ಜ.19-ಪೌರತ್ವ ಕೇವಲ ಹಕ್ಕು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕರೂ ಸಮಾಜದಲ್ಲಿ ನಿರ್ವಹಿಸಬೇಕಾದ ಕರ್ತವ್ಯವೂ ಆಗಿದೆ ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರತ್ ಎ. ಬೊಬ್ಡೆ ಹೇಳಿದ್ದಾರೆ. ನಾಗ್ಪುರದ ರಾಷ್ಟ್ರಸಂತ ತುಕಡೋಜಿ ಮಹಾರಾಜ್ ನಾಗಪುರ ಯುನಿವರ್ಸಿಟಿ (ಆರ್ಟಿಎಂಎನ್ಯು) 107ನೇ ಘಟಿಕೋತ್ಸವದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಗಳು ಮಾತನಾಡಿದರು.
ಪೌರತ್ವವನ್ನು ಯಾರೂ ಕೂಡ ಕೇವಲ ಹಕ್ಕು ಎಂದು ತಿಳಿಯಬಾರದು. ಇದು ಹಕ್ಕಿಗಿಂತಲೂ ನಾವು ಜವಾಬ್ದಾರಿಯುತ ಪ್ರಜೆಗಳಾಗಿ ಸಮಾಜದ ಕಡೆಗೆ ನಿರ್ವಹಿಸಬೇಕಾದ ಕರ್ತವ್ಯವೂ ಆಗಿದೆ ಎಂದು ಅವರು ಪ್ರತಿಪಾದಿಸಿದರು. ಪೌರತ್ವ ಎಲ್ಲರ ಹಕ್ಕು. ಅದೇ ರೀತಿ ಎಲ್ಲರಿಗೂ ಸಮಾನವಾದ ಹಕ್ಕು ದೊರೆಯಬೇಕೆಂಬುದು ಭಾರತದ ಸಂವಿಧಾನದಲ್ಲಿ ಮಾತ್ರ ತಿಳಿಸಲಾಗಿಲ್ಲ. ಇದನ್ನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು 1956ರ ಕ್ರಾಂತಿ ಮೂಲಕ ತಿಳಿಸಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿಯವರು ಉಲ್ಲೇಖಿಸಿದರು.
ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ನ್ಯಾಯ, ಸಮಾನತೆ ಮತ್ತು ಕರ್ತವ್ಯದ ಹಕ್ಕುಗಳನ್ನು ಹೊಂದಿರುತ್ತಾರೆ. ಈ ಮಹತ್ವದ ಕಾರ್ಯಗಳಿಗೆ ಚ್ಯುತಿ ಬಾರದಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಇದು ನಮ್ಮ ಕರ್ತವ್ಯವೂ ಆಗಿದೆ ಎಂದರು.
ನ್ಯಾಯ ನೀಡುವುದು ಮತ್ತು ನ್ಯಾಯ ನಿರ್ಣಯಿಸುವುದು ಅತ್ಯಂತ ಪರಮ ಪವಿತ್ರ ಕಾರ್ಯ. ಈ ದೇಶದಲ್ಲಿ ಪ್ರತಿಯೊಬ್ಬರೂ ನ್ಯಾಯ ಪಡೆಯುವ ಹಕ್ಕು ಹೊಂದಿದ್ದಾರೆ. ನ್ಯಾಯ ಲಭಿಸುವುದು ವ್ಯಕ್ತಿಯಿಂದ ವ್ಯಕ್ತಿಗೆ, ಕಾಲದಿಂದ ಕಾಲಕ್ಕೆ ಮತ್ತು ಸನ್ನಿವೇಶದಿಂದ ಸನ್ನಿವೇಶಕ್ಕೆ ಬದಲಾಗಬಹುದಾದರೂ ನ್ಯಾಯ ದಕ್ಕಿಸಿಕೊಡಬೇಕೆಂಬುದು ಇದರ ಧ್ಯೇಯವಾಗಿರುತ್ತದೆ ಎಂದು ಅವರು ಹೇಳಿದರು.
ಇಂದು ನಿರ್ಣಯವಾಗುವ ನ್ಯಾಯವನ್ನು ಕೆಲವೊಮ್ಮೆ ನಾಳೆ ಸಮರ್ಥಿಸಿಕೊಳ್ಳಲು ಸಾಧ್ಯವಾಗದಂತಹ ಸನ್ನಿವೇಶ ಉದ್ಭವಿಸುತ್ತದೆ. ನ್ಯಾಯಾಧೀಶರು ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಂಡು ನ್ಯಾಯದ ಹಿತದೃಷ್ಟಿಯಿಂದ ಸಮಂಜಸ ತೀರ್ಪು ನೀಡಬೇಕಾಗುತ್ತದೆ ಎಂದು ಅವರು ತಿಳಿಸಿದರು.