ಬೆಂಗಳೂರು,ಜು.27- ಯಡಿಯೂರಪ್ಪ ಅವರ ಸಂಪುಟದಲ್ಲಿದ್ದ ಹಲವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ವಲಸಿಗರಿಗೂ ಇದೇ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಹೊಸ ಮುಖ್ಯಮಂತ್ರಿ ನೇಮಕ ಮಾಡುವುದರ ಜೊತೆಗೆ ಹೊಸ ಸಂಪುಟ ರಚನೆ ಮಾಡಲು ಬಿಜೆಪಿ ಹೈಕಮಾಂಡ್ ಮುಂದಾಗಿದೆ.
ಭವಿಷ್ಯದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ರಚನೆಗೆ ಮುಂದಾಗಿರುವ ಹೈಕಮಾಂಡ್ ಈಗಾಗಲೇ ಆಯ್ಕೆಗೆ ಕೆಲ ಮಾನದಂಡಗಳನ್ನು ಹಾಕಿದೆ. ಸಂಪುಟ ಸೇರಲು ಕ್ಲೀನ್ ಇಮೇಜ್ ಹೊಂದಿರಬೇಕು. ಜಾತಿವಾರು, ಪ್ರಾದೇಶಿಕವಾರು ಆಧಾರದಲ್ಲಿ ಯುವ ಮುಖಗಳಿಗೆ ಆದ್ಯತೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಸೇರಿ ಯಾವುದೇ ಆರೋಪ ಇರಬಾರದು.
ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ಬಿಎಸ್ವೈ ಸಂಪುಟದಲ್ಲಿದ್ದ ಸಚಿವರೆಲ್ಲಾ ಈಗ ಮಾಜಿಗಳಾಗಿದ್ದಾರೆ. ಅದರಲ್ಲಿ 10-14 ಮಾಜಿ ಸಚಿವರಿಗೆ ಮತ್ತೆ ಹೊಸ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ. ಹಿರಿಯ ನಾಯಕರಿಗೂ ಸಚಿವ ಸ್ಥಾನ ಅನುಮಾನ ಎನ್ನಲಾಗುತ್ತಿದೆ.
ಬಿಎಸ್ವೈ ಸಂಪುಟದಲ್ಲಿದ್ದ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ಶೆಟ್ಟರ್, ಸುರೇಶ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ಪ್ರಭು ಚವ್ಹಾಣ್ಗೆ ಹೊಸ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಹೇಳಲಾಗುತ್ತಿದೆ. ವಲಸಿಗರಿಗೂ ಈ ಬಿಸಿ ತಟ್ಟಲಿದೆ. ಬಿ.ಸಿ.ಪಾಟೀಲ್, ಶಿವರಾಮ ಹೆಬ್ಬಾರ್, ಶ್ರೀಮಂತ ಪಾಟೀಲ್, ಕೆ.ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಯಡಿಯೂರಪ್ಪ ನಿಲುವು ಮಹತ್ವದ ಪಾತ್ರ ವಹಿಸಲಿದೆ.
ಇನ್ನು ಮೈಸೂರು ಶಾಸಕ ರಾಮದಾಸ್, ಸುರಪುರ ಶಾಸಕ ರಾಜುಗೌಡ, ಹಾಸನ ಶಾಸಕ ಪ್ರೀತಂ ಗೌಡ, ಯಲಬುರ್ಗ ಶಾಸಕ ಹಾಲಪ್ಪ ಆಚಾರ್, ಕುಡಚಿಯ ಪಿ.ರಾಜೀವ್, ಕಾರ್ಕಳದ ಸುನಿಲ್ ಕುಮಾರ್, ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ಅಂಕೋಲದ ರೂಪಾಲಿ ನಾಯಕ್ ಹಾಗೂ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ.
ಯಾರು ಮುಖ್ಯಮಂತ್ರಿ ಆಗಲಿದ್ದಾರೆ, ಹೈಕಮಾಂಡ್ ಸಂಪುಟ ರಚನೆ ಕುರಿತು ಏನು ನಿರ್ದೇಶನ ನೀಡಲಿದೆ ಎನ್ನುವುದರ ಮೇಲೆ ನೂತನ ಸಚಿವ ಸಂಪುಟದಲ್ಲಿ ಯಾರು ಇನ್, ಯಾರು ಔಟ್ ಎನ್ನುವುದು ಅಂತಿಮಗೊಳ್ಳಲಿದೆ.
ಪಕ್ಷಕ್ಕೆ ಮುಂದಿನ 10-15 ವರ್ಷ ದುಡಿಯಬಲ್ಲ ಯುವಕರಿಗೆ ಅವಕಾಶ ನೀಡಬೇಕು. ಸರ್ಕಾರಕ್ಕೆ ಇಮೇಜ್, ಪಕ್ಷದ ವರ್ಚಸ್ಸು ಹೆಚ್ಚಿಸುವ ಯುವ ಮುಖಗಳಿಗೆ ಆದ್ಯತೆ ಜೊತೆಗೆ ಶಿಕ್ಷಣ, ಸಂಘಟನಾ ಚತುರತೆ, ಜನರ ನಡುವೆ ಬೆರೆಯುವ ನಾಯಕನಿಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಪ್ರತಿ ಬಾರಿ ಸಂಪುಟದಲ್ಲಿ ಸಾಧಾರಣವಾಗಿ ಹಿರಿಯರಿಗೆ ಮಣೆ ಹಾಕಲಾಗುತ್ತದೆ. ಆದರೆ ಈ ಬಾರಿ ಶೇ.40ರಷ್ಟು ಮಂದಿ ಹಿರಿಯರು, ಶೇ.60ರಷ್ಟು ಮಂದಿ ಯುವ ಮುಖಗಳಿಗೆ ಸ್ಥಾನ ಕಲ್ಪಿಸಲು ಹೈಕಮಾಂಡ್ ಕಾರ್ಯತಂತ್ರ ಮಾಡಿದೆ ಎನ್ನಲಾಗಿದೆ.
# ಯಾರ್ಯಾರಿಗೆ ಕೊಕ್:
* ಈಶ್ವರಪ್ಪ, ಶಿವಮೊಗ್ಗ
* ಜಗದೀಶ್ ಶೆಟ್ಟರ್, ಧಾರವಾಡ ಕೇಂದ್ರ
* ಸುರೇಶ್ಕುಮಾರ್, ರಾಜಾಜಿನಗರ, ಬೆಂಗಳೂರು
* ಸೋಮಣ್ಣ, ಗೋವಿಂದರಾಜಾನಗರ, ಬೆಂಗಳೂರು
* ಲಕ್ಷ್ಮಣ ಸವದಿ, ಮೇಲ್ಮನೆ ಸದಸ್ಯ
* ಸಿ.ಸಿ.ಪಾಟೀಲ್, ನರಗುಂದ
* ಪ್ರಭು ಚವ್ಹಾಣ್, ಔರಾದ್
* ಶಶಿಕಲಾ ಜೊಲ್ಲೆ, ನಿಪ್ಪಾಣಿ
# ವಲಸಿಗರಿಗೆ ಕೊಕ್:
* ಶ್ರೀಮಂತಪಾಟೀಲ್, ಕಾಗವಾಡ
* ಶಂಕರ್, ಮೇಲ್ಮನೆ ಸದಸ್ಯ
* ನಾರಾಯಣಗೌಡ, ಕೆ.ಆರ್.ಪೇಟೆ
# ಹೊಸಬರಿಗೆ ಅವಕಾಶ:
* ಬಾಲಚಂದ್ರ ಜಾರಕಿಹೊಳಿ, ಅರಭಾವಿ
* ಚಂದ್ರಪ್ಪ, ಹೊಳಲ್ಕೆರೆ
* ಪೂರ್ಣಿಮಾ ಶ್ರೀನಿವಾಸ್, ಹಿರಿಯೂರು
* ಅಪ್ಪಚ್ಚು ರಂಜನ್, ಮಡಿಕೇರಿ
* ಸುನೀಲ್ ಕುಮಾರ್, ಕಾರ್ಕಳ
* ರಾಜೂಗೌಡ, ಸುರಪುರ
* ಪಿ.ರಾಜೀವ್, ಕುಡಚಿ
* ದತ್ತಾತ್ರೇಯ ಪಾಟೀಲ್, ಕಲಬುರಗಿ ದಕ್ಷಿಣ
* ಸತೀಶ್ ರೆಡ್ಡಿ, ಬೊಮ್ಮನಹಳ್ಳಿ
* ಮುನಿರತ್ನ, ಆರ್.ಆರ್. ನಗರ
* ಶಿವನಗೌಡ ನಾಯಕ್, ದೇವದುರ್ಗ
* ರಾಮದಾಸ್-ಮೈಸೂರು
* ಹಾಲಪ್ಪ ಆಚಾರ್, ಯಲಬುರ್ಗ
* ಕುಮಾರ ಬಂಗಾರಪ್ಪ, ಸೊರಬ
* ಬಿ.ಸಿ.ನಾಗೇಶ್, ತಿಪಟೂರು
* ಎಂ.ಪಿ.ಕುಮಾರಸ್ವಾಮಿ, ಮೂಡಿಗೆರೆ
* ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಂದಾಪುರ
* ಎ.ಎಸ್.ಪಾಟೀಲ್ ನಡಹಳ್ಳಿ, ಮುದ್ದೆಬಿಹಾಳ
ಬಿಎಸ್ವೈ ಸಂಪುಟದಲ್ಲಿದ್ದವರಲ್ಲಿ ಯಾರಿಗೆ ಅವಕಾಶ:
ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಅರವಿಂದ ಲಿಂಬಾವಳಿ, ಶ್ರೀರಾಮುಲು, ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಉಮೇಶ್ ಕತ್ತಿ, , ಎಸ್.ಅಂಗಾರ ಮತ್ತಿತರರು ಉಳಿಯುವ ಸಾಧ್ಯತೆ ಇದೆ.