ಧಾರವಾಡ: ಶೂರ್ಪನಖಿಯ ಮೂಗನ್ನು ಲಕ್ಷ್ಮಣನು ಖಡ್ಗದಿಂದ ಕತ್ತರಿಸಿದರೆ, ಆಧುನಿಕ ಯುಗದಲ್ಲಿ ಬಾಯಿಂದಲೇ ಪತ್ನಿಯ ಮೂಗು ಕತ್ತರಿಸಿದ ಪತಿರಾಯ. ರಾಮ-ಲಕ್ಷ್ಮಣರನ್ನು ಮೋಹಿಸಿ ಬಂದ ಶೂರ್ಪನಕಿ ಮೂಗನ್ನು ಲಕ್ಷ್ಮಣ ಖಡ್ಗದಿಂದ ಕತ್ತರಿಸಿದ ಪುರಾಣದ ಕಥೆ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಇಲ್ಲೊಬ್ಬ ಆಧುನಿಕ ಪತಿ ಬಾಯಿಯಿಂದಲೇ ತನ್ನ ಪತ್ನಿಯ ಮೂಗನ್ನೇ ಕಚ್ಚಿ ತುಂಡರಿಸುವ ಮೂಲಕ ವಿಕೃತಿ ಮೆರೆದಿದ್ದಾನೆ.
ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಉಮೇಶ ಗುಂಡಗುದರಿ ಹೆಂಡತಿ ಗೀತಾಳ ಮೂಗು ಕಚ್ಚಿದ ಪಾಪಿ ಪತಿ. ಉಮೇಶನ ಈ ವಿಕೃತ ಕೆಲಸದಿಂದ ಪತ್ನಿ ಗೀತಾಳ ಮೂಗು ಸಂಪೂರ್ಣ ಗಾಯಗೊಂಡಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದ ನಿವಾಸಿಯಾಗಿರೊ ಉಮೇಶನಿಗೆ ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗೀತಾಳನ್ನು ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎರಡು ಮಕ್ಕಳಿವೆ. ಕುಡಿತದ ದಾಸನಾದ ಉಮೇಶ ಐದು ವರ್ಷಗಳ ಹಿಂದೆ ಪತ್ನಿ ಜತೆಗೆ ಜಗಳವಾಡಿ ಮನೆ ಬಿಟ್ಟಿ ಹೊಗಿದ್ದ ಎನ್ನಲಾಗಿದೆ. ದಿಕ್ಕು ತೋಚದ ಗೀತಾ ತವರುಮನೆ ಅಮ್ಮಿನಬಾವಿಗೆ ಬಂದು ನೆಲೆಸುತ್ತಾಳೆ. ಆರು ತಿಂಗಳ ನಂತರ ಬಂದ ಉಮೇಶ, ಪತ್ನಿಯ ತವರು ಮನೆಯಲ್ಲಿ ಉಳಿದ. ಆಗಾಗ್ಗೆ ಕುಡಿದು ಬಂದು ಕ್ಯಾತೆ ತೆಗೆದು, ಹಿಂಸೆ ನೀಡುತ್ತಿದ್ದನು ಎಂಬುದು ಗೀತಾ ಕುಟುಂಬಸ್ಥರ ಆರೋಪ.
ನಿತ್ಯವೂ ಕುಡಿದ ಮತ್ತಿನಲ್ಲಿ ಉಮೇಶ ಪತ್ನಿ ಜತೆಗೆ ಕ್ಯಾತೆ ತೆಗೆಯುವುದು ಸಾಮಾನ್ಯ. ಗಂಡ ಅವಾಚ್ಯ ಶಬ್ಧಗಳಿಂದ ನಿಂದಿಸಿದರೂ, ಗೀತಾ ಮಾತ್ರ ತುಟಿ ಪಿಟಕ್ ಎನುತ್ತಿರಲಿಲ್ಲ. ಎಂದಿನಂತೆ ಶನಿವಾರ ರಾತ್ರಿ ಕುಡಿದು ಪತ್ನಿಯ ಮನೆಗೆ ಹೋದ ಉಮೇಶ ಕ್ಯಾತೆ ತೆಗೆದಿದ್ದು, ಭಾನುವಾರ ಜಗಳ ವಿಕೋಪಕ್ಕೆ ತಿರುಗಿದೆ. ಆಗ ಮೂಗು ತುಂಡಾಗುವಂತೆ ಕಚ್ಚಿದ್ದಾನೆ, ಅಲ್ಲದೇ, ದಂಪತಿಗಳ ಜಗಳವನ್ನು ತಡೆಯಲು ಬಂದ ಅತ್ತೆಯ ಕತ್ತು ಹಿಸುಕಿದ್ದಾನೆ. ತಾಯಿ-ಮಗಳು ಕಿರಿಚಾಡುವ ಶಬ್ಧ ಕೇಳಿದ ಪಕ್ಕದ ಮನೆಯವರು ಬಂದಾಗ, ಉಮೇಶ ಅಲ್ಲಿಂದ ತನ್ನ ಕಾಲಿಗೆ ಬುದ್ಧಿ ಹೇಳಿದ್ದಾನೆ. ಗೀತಾಳ ಮೂಗಿನಿಂದ ರಕ್ತ ವತ್ತರಿಸಿ ಬರುತ್ತಿತ್ತು. ನಂತರ ಗ್ರಾಮಸ್ಥರು ಚಿಕಿತ್ಸೆಗಾಗಿ ಕಿಮ್ಸ್ ಗೆ ರವಾನಿಸಿದ್ದಾರೆ.
ಪತಿ ದೌರ್ಜನ್ಯಕ್ಕೆ ಪತ್ನಿ ಕುಟುಂಬ ನಲುಗಿ ಹೋಗಿದೆ. ಮುತ್ತಿನಂಥ ಹೆಂಡತಿ. ಚಿನ್ನದಂತ 2 ಮಕ್ಕಳೊಂದಿಗೆ ಸಂಸಾರ ನಡೆಸಬೇಕಾದ ಉಮೇಶ ಪತ್ನಿ ಮೂಗು ಕಚ್ಚಿ, ಪರಾರಿಯಾಗಿದ್ದಾನೆ. ಇತನ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಮೇಶನ ಬಂಧನಕ್ಕೆ ಜಾಲ ಬೀಸಿದ್ದಾರೆ.
ನನ್ನ ಪತಿ ಆಗಾಗೇ ಬಂದು ನನಗೆ ಕಿರುಕುಳ ನೀಡುತ್ತಿದ್ದ. ಅವನು ಮದ್ಯದ ದಾಸನಾಗಿದ್ದ. ಇದರಿಂದ ನಾನು ನನ್ನ ಮಕ್ಕಳ ಜೊತೆ ತವರು ಮನೆಗೆ ಬಂದು ಜೀವನ ನಡೆಸುತ್ತಿದ್ದೆ. ಆದರೆ ಕಳೆದ ಆರು ತಿಂಗಳಿನಿಂದ ಇಲ್ಲಿಯೇ ಬಂದಿದ್ದರು. ನನ್ನ ಪತಿ ಇಂದಲ್ಲ ನಾಳೆ ಸರಿಯಾಗಬಹುದೆಂದು ಕಿರುಕುಳವನ್ನು ತಡೆದುಕೊಂಡು ಬಂದಿದ್ದೆ. ಆದ್ರೆ ಇಂದು ನನ್ನ ಗಂಡ ಕುಡಿದು ಬಂದು ಗಲಾಟೆ ಮಾಡತೊಡಗಿದ. ಆಗ ಜಗಳ ವಿಕೋಪಕ್ಕೆ ಹೋಯಿತು. ನನ್ನ ಎರಡು ಕೈಹಿಡಿದು ನನ್ನ ಮೂಗು ಕಚ್ಚಿದ ಬಳಿಕ ನನ್ನತಾಯಿಯ ಕತ್ತು ಹಿಸುಕಿದ. ಆಗ ನಾನು ಹಾಗೂ ನನ್ನ ತಾಯಿ ಜೋರಾಗಿ ಕಿರುಚಿದೆವು. ಆಗ ಅಕ್ಕ ಪಕ್ಕದ ಜನರು ಬಂದು ನಮ್ಮನ್ನ ಕಾಪಾಡಿದರು. ಮೂಗನ್ನು ಪ್ಲಾಸ್ಟಿಕ್ ಸರ್ಜರಿ ಮಾಡಿಸಬೇಕೆಂದು ವೈದ್ಯರು ಹೇಳುತ್ತಿದ್ದಾರೆ ಎಂದು ಗಾಯಗೊಂಡ ಗೀತಾ ಹೇಳಿದ್ದಾಳೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.