ಕೊಪ್ಪಳ: ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ನನ್ನನ್ನು ವಿಲನ್ ಮಾಡಬೇಡಿ, ಅವರ ವಿರುದ್ದ ಮಾತನಾಡಿದ್ರೆ ನಾವು ಸುಟ್ಟು ಹೋಗ್ತೀವಿ ಎಂದು ಪ್ರವಾಸೋದ್ಯಮ ಸಚಿವ ಸಿ ಪಿ ಯೋಗೇಶ್ವರ್ ಅವರು ಹೇಳಿದರು.
ಕೊಪ್ಪಳದ ಅಂಜನಾದ್ರಿ ಬೆಟ್ಟದ ಬಳಿ ಸುದ್ದಿಗಾರರ ಜೊತೆ ಮಾತನಾಡಿ, ಬಿಎಸ್ ವೈ ಅವರು ನಮ್ಮ ನಾಯಕರು. ಅವರನ್ನು ನಾವು ಟಾರ್ಗೇಟ್ ಮಾಡಲ್ಲ. ಅವರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸುವ ಕೆಲಸವನ್ನೂ ನಾವು ಮಾಡುತ್ತಿಲ್ಲ. ನಮ್ಮ ದೆಹಲಿ ಭೇಟಿ ವಿಚಾರ, ನಮ್ಮಲ್ಲಿ ಆಂತರಿಕ ಸಮಸ್ಯೆಗಳು ಇವೆ. ಹಾಗಾಗಿ ನಾಯಕರ ಮುಂದೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ ವಿನಃ ಬೇರೆ ವಿಷಯವಲ್ಲ ಎಂದರು.
ಶಾಸಕ ಯತ್ನಾಳ ಹಾಗೂ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಬೇಟಿ ವಿಚಾರ, ಪ್ರವಾಸೋದ್ಯಮ ಇಲಾಖೆ ಮೂಲಕವೇ ರಾಜ್ಯದಲ್ಲಿ ನಾಲ್ಕು ಕಡೆ ತ್ರಿ ಸ್ಟಾರ್ ಹೋಟಲ್ ಕಟ್ಟಲು ನಿರ್ಧರಿಸಿದ್ದೇವೆ. ಹಾಗಾಗಿ ಕಲಬುರ್ಗಿಯಲ್ಲಿ ಹೋಟೆಲ್ ಆರಂಭಕ್ಕೆ ಗುದ್ದಲಿ ಪೂಜೆ ನೆರವೇರಿಸುವ ಸಂಬಂಧ ಭೇಟಿ ಮಾಡಿರುವೆ. ಅವರ ಕ್ಷೇತ್ರದಲ್ಲಿ ತೆರಳುವಾಗ ಭೇಟಿ ಮಾಡಿರುವೆ ಅಷ್ಟೇ ಮತ್ತೆ ಬೇರೆ ವಿಚಾರವಿಲ್ಲ. ಯತ್ನಾಳ ಹಾಗೂ ನಾವು ಸಮಕಾಲಿನರು ಹಾಗಾಗಿ ಅವರನ್ನ ಭೇಟಿ ಮಾಡಿದ್ದೇನೆ. ಮತ್ತ್ಯಾವ ವಿಚಾರವೂ ಇಲ್ಲ ಎಂದರು.
ನಾವು ಪರೀಕ್ಷೆ ಬರೆದಿದ್ದೇವೆ. ಫಲಿತಾಂಶ ಯಾವಾಗ ಬರುತ್ತೆ ಎಂದು ನೋಡೋಣ. ಪಕ್ಷದ ಹಿರಿಯರು ಯಾವಾಗ ತೀರ್ಮಾನ ಮಾಡ್ತಾರೋ ಆವಾಗ ಬರುತ್ತೆ ಎಂದರು. ರಮೇಶ ಜಾರಕಿಹೊಳಿ ಅವರು ಬಿಜೆಪಿಯ ಮೂವರಿಂದ ಅನ್ಯಾಯವಾಗಿದೆ ಎನ್ನುವ ವಿಚಾರ ನನಗೆ ಗೊತ್ತಿಲ್ಲ. ಅವರ ದೆಹಲಿ ಭೇಟಿ ವಿಷಯವೂ ನನಗೆ ಗೊತ್ತಿಲ್ಲ ಎಂದರು.
ಇಲಾಖೆ ಕಾರ್ಯಕ್ರಮದ ನಿಮಿತ್ಯ ನಾನು ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದೇನೆ. ಸುಮ್ಮನೆ ನನ್ನ ಭೇಟಿ ವಿಚಾರ ಬೇರೆಯದಕ್ಕೆ ತಳುಕು ಹಾಕಬೇಡಿ. ಇನ್ನೂ ದೇವಸ್ಥಾನ ಆರಂಭವಾಗದಿದ್ದರೂ ನಿಯಮ ಉಲ್ಲಂಘಿಸಿ ದೇವಸ್ಥಾನದಕ್ಕೆ ಭೇಟಿ ನೀಡಿದ ವಿಚಾರದಲ್ಲಿ ನಾವು ಲಾಕ್ ಡೌನ್ ಓಪನ್ ಆದ ಬಳಿಕ ಇಲ್ಲಿಗೆ ಬಂದಿದ್ದೇವೆ. ಜನರು ಯಾರೂ ಒಳ ಬಂದಿಲ್ಲ ನಾವು ಮಾತ್ರ ತೆರಳಿದ್ದು ಇಲಾಖೆ ಅಭಿವೃದ್ಧಿ ವಿಚಾರ ಚರ್ಚೆ ಮಾಡಲು ಬಂದಿದ್ದೇವೆ. ನಾವು ಯಾವ ನಿಯಮವನ್ನೂ ಉಲ್ಲಂಘನೆ ಮಾಡಿಲ್ಲ ಎಂದರು.
ಅಂಜನಾದ್ರಿ ಅಭಿವೃದ್ಧಿಗೆ ಸಾವಿರಾರು ಕೋಟಿ ಬೇಕು :
ಅಂಜನಾದ್ರಿ ಬೆಟ್ಟವನ್ನು ಕೇವಲ ಪ್ರವಾಸೋದ್ಯಮಯೊಂದೇ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲ. ನಾಲ್ಕಾರು ಇಲಾಖೆ ಸಹಯೋಗದಲ್ಲಿ ನಾವು ಅಭಿವೃದ್ಧಿ ಮಾಡಬೇಕಿದೆ. ಇದಕ್ಕೆ ಸಾವಿರಾರು ಕೋಟಿ ರೂ ಬೇಕಾಗುತ್ತದೆ. ಇಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದೆ. ಈ ದೃಷ್ಟಿಯಿಂದ ನಾವು ಹಲವು ಸಚಿವರು ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಇಲ್ಲಿ ಹಲವು ಸಾಕ್ಷಿ, ಪುರಾವೆಗಳಿವೆ. ಪೌರಾಣಿಕ, ಐತಿಹಾಸಿ ಹಿನ್ನೆಲೆ ಇದೆ. ಸುಮ್ನೆ ಯಾರೋ ಹೇಳುತ್ತಾರೆ ಎಂದು ನಾವು ಸುಮ್ಮನಿರೋದಲ್ಲ. ಅಂಜನಾದ್ರಿಯಲ್ಲಿಯೇ ಹನುಮಂತ ಜನಿಸಿದ್ದು ಎನ್ನುವುದಕ್ಕೆ ಹಲವು ಸಾಕ್ಷ್ಯ ಇವೆ. ಸರ್ಕಾರದ ನಿಲುವೂ ಇದೇ ಆಗಿದೆ. ಅಂಜಿನಾದ್ರಿ ಮಾಸ್ಟರ್ ಪ್ಲ್ಯಾನ್ ಸಮಗ್ರ ಅಭಿವೃದ್ಧಿಗೆ ಸರ್ಕಾರವು ಬದ್ದ ಇದೆ ಎಂದರು.