ಹಾವೇರಿ: ರಾಜ್ಯದಲ್ಲಿ ಯಡಿಯೂರಪ್ಪ ಅವರೆ ಸಿಎಂ ಆಗಿ ಮುಂದುವರೆಯುತ್ತಾರೆ. ಕೋವಿಡ್ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆ ಕೂಡ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಹಾವೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದೆಯೂ ನಮ್ಮ ಸರ್ಕಾರವೆ ಅಧಿಕಾರಕ್ಕೆ ಬರುತ್ತದೆ. ಮನೆ ಅಂದ್ಮೇಲೆ ಜಗಳ, ವೈಮನಸ್ಸು ಇರುತ್ತವೆ. ಅದರಂತೆ ಪಕ್ಷದಲ್ಲಿ ಏನಾದರೂ ಆಗಿರಬಹುದು. ಪಕ್ಷದ ಹಿರಿಯರು ಅವುಗಳನ್ನ ಸರಿ ಮಾಡುತ್ತಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬರುತ್ತಿದ್ದಾರೆ. ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಅವುಗಳನ್ನ ಆಲಿಸಿ ಅವರು ಸರಿ ಮಾಡ್ತಾರೆ. ಭಿನ್ನಾಭಿಪ್ರಾಯಗಳು ಇದ್ದಾಗ ಮನೆಯ ಹಿರಿಯರಿಗೆ ಹೇಳಲಾಗುತ್ತದೆ ಎಂದಿದ್ದಾರೆ.
ಮನೆಯ ಹಿರಿಯರಾಗಿರೋ ಅರುಣ್ ಸಿಂಗ್ ಬರ್ತಿದ್ದಾರೆ. ಎಲ್ಲವೂ ಸರಿ ಆಗುತ್ತದೆ. ಯಡಿಯೂರಪ್ಪನವರೆ ಸಿಎಂ ಆಗಿ ಮುಂದುವರಿತಾರೆ. ಕೋವಿಡ್ ಸಂದರ್ಭದಲ್ಲಿ ಇಂಥಾದ್ದು ಆಗಬಾರದು. ಆಗುತ್ತಿರುವುದರಿಂದ ಅರುಣ್ ಸಿಂಗ್ ಅವರು ಬರುತ್ತಿದ್ದಾರೆ, ಇದನ್ನು ಸರಿ ಮಾಡುತ್ತಾರೆ. ಶಾಸಕ ಅರವಿಂದ ಬೆಲ್ಲದ ಭೇಟಿ ನನಗೆ ಗೊತ್ತಿಲ್ಲ. ಶಾಸಕ ಬೆಲ್ಲದ ವೈಯಕ್ತಿಕ ಕೆಲಸಕ್ಕೆ ಹೋಗಿದ್ದೆ ಅಂತಾ ಹೇಳಿದ್ದಾರೆ. ಅದರ ಬಗ್ಗೆ ಹೆಚ್ಚು ಗೊತ್ತಿಲ್ಲ ಎಂದು ಹೇಳಿದ್ದಾರೆ.