ಚಿತ್ರದುರ್ಗ, (ಮೇ.16) : ಅನುಕಂಪದ ಆಧಾರದ ಮೇಲೆ ಪಡೆದ ಗ್ರಂಥಪಾಲಕ ಹುದ್ದೆಯಲ್ಲಿ ನಾನು ಮುಂದುವರಿಯಲು ನನಗೆ ನ್ಯಾಯ ಕೊಡಿಸಿ ಎಂದು ಲೀಲಾವತಿ ಕೋರಿದ್ದಾರೆ.
ಹಿರಿಯೂರು ತಾಲ್ಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಬಿ.ಬಸವರಾಜ್ ಎಂಬುವ ವ್ಯಕ್ತಿ 2007 ರಿಂದ ಗ್ರಂಥಪಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಆದರೆ 2020 ಮಾರ್ಚ್ 14 ರಂದು ಅವರು ಆಕಸ್ಮಿಕವಾಗಿ ಮೃತಪಟ್ಟರು.
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಅವರ ಶಿಫಾರಸ್ಸಿನ ಆಧಾರದ ಮೇಲೆ ಮೃತನ ಪತ್ನಿ ಬಿಕಾಂ ಪದವೀಧರೆ ಲೀಲಾವತಿ ಅವರು ಸದರಿ ಹುದ್ದೆಯಲ್ಲಿ ಮುಂದುವರಿಸಿಕೊಂಡು ಹೋಗುವಂತೆ ಅಂದಿನ ಜಿಪಂ ಸಿಇಒ ಆದೇಶಿಸಿದ್ದರು.
ಸಿಇಒ ಆದೇಶದಂತೆ ಕರ್ತವ್ಯಕ್ಕೆ ಹಾಜರಾದ ಲೀಲಾವತಿ ಒಂಬತ್ತು ತಿಂಗಳು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಿ, ಮಾಸಿಕ 7 ಸಾವಿರ ರೂ.ನಂತೆ ಒಟ್ಟು 63 ಸಾವಿರ ವೇತನದಲ್ಲಿ 21 ಸಾವಿರ ವೇತನ ಪಡೆದಿದ್ದಾರೆ. ಈಗ ಇದ್ದಕ್ಕಿದ್ದಂತೆ ಗ್ರಂಥಪಾಲಕ ಹುದ್ದೆಗೆ ಬೇರೆಯವರನ್ನು ನೇಮಿಸಿರುವ ಪ್ರಯತ್ನ ನಡೆಸಿದ್ದಾರೆ. ಆರು ವರ್ಷದ ಮಗು ಇರುವ ನನ್ನ ಬದುಕು ಕಳಚಿಕೊಂಡತ್ತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ನನಗೆ ಯಾವುದೇ ಮಾಹಿತಿ ನೀಡದೆ, ಈಗ ನನ್ನನ್ನು ಸದರಿ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿದರೆ ಗ್ರಂಥಪಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾರೆ. ಬೇಕಿದ್ದರೆ ನೀನು ಅರ್ಜಿ ಹಾಕಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಿ ಎಂದು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾಳೆ.